Posts

Showing posts from August, 2020

ವಾಗರ್ಥವಿಲಾಸ

 ಕೊಯ್ಲು ಮುಗಿದ ವಿಶಾಲವಾಗಿ ಹಬ್ಬಿ ಮಲಗಿದ್ದ ಗದ್ದೆಯ ನಡುವಿನಲ್ಲಿ ಏನೋ ಗಜಿಬಿಜಿ ಶುರುವಾಗಿತ್ತು. ಅದೇನೆಂದು ಕುತೂಹಲ ತಡೆಯದೆ ಹೋಗಿ ನೋಡಿದರೆ ಇನ್ನೆರೆಡು ದಿನದಲ್ಲಿ ಅಲ್ಲಿ ಯಕ್ಷಗಾನ ಎನ್ನುವ ಸುದ್ದಿ ಕೇಳಿ ಸಂಭ್ರಮ. ರಂಗ ಸಿದ್ಧವಾಗುವ ಮೊದಲೇ ನಾವೆಲ್ಲಿ ಕೂರುವುದು ಎನ್ನುವ ಕಿತ್ತಾಟ, ಇದು ನನ್ನ ಜಾಗ ಎಂದು ಗಡಿ ನಿರ್ಮಿಸುವ ಕೆಲಸ ಆಗಿಬಿಟ್ಟಿತ್ತು. ಆದಿನ  ಬೆಳಿಗ್ಗೆಯಿಂದಲೇ ಕಣ್ಣು ಗಡಿಯಾರದ ಕಡೆ, ಯಾವಾಗ ರಾತ್ರಿ ಆಗುವುದೋ ಎನ್ನುವ ಕಾತುರ. ಏನು ತಿಂದೆವು ಎನ್ನುವುದೂ ಗೊತ್ತಾಗದ ಹಾಗೆ ನುಂಗಿ ನಮ್ಮ ಜಾಗಕ್ಕೆ ಓಡುವ ಹೊತ್ತಿಗೆ ರಂಗ ಪ್ರವೇಶ ಆಗಿ ಹೋಗಿತ್ತು. ನಮ್ಮದೆನ್ನುವ ಜಾಗ ಕಷ್ಟಪಟ್ಟು ಗುರುತಿಸಿ ತೆಗೆದುಕೊಂಡು ಹೋಗಿದ್ದ ಕಂಬಳಿ ಹಾಸಿ ಕುಳಿತರೆ ಇಡೀ ಜಗತ್ತೇ ಮರೆಯಾಗಿ ಹೊಸದೊಂದು ಲೋಕ ಕಣ್ಣೆದೆರು ಇಳಿದಂತೆ. ಯಕ್ಷ, ಗಂಧರ್ವ, ದೇವತೆ, ರಾಕ್ಷಸರು ಎಲ್ಲರೂ ಆ ಪುಟ್ಟ ರಂಗದಲ್ಲಿ ಬಂದು ಕುಣಿದು ಮೂರು ಲೋಕಗಳು ಒಂದೆಡೆ ಮೇಳೈಸಿ ಆ ವೈಭವಕ್ಕೆ ಕಣ್ಣು ಮುಚ್ಚಿ ಹೋಗುವಾಗ ಬಡಿಯುವ ಚೆಂಡೆ, ಏರುವ ಭಾಗವತರ ಸ್ವರ. ಅದೊಂದು ವಿಸ್ಮಯ ಲೋಕ. ಆ ವಿಸ್ಮಯ ಲೋಕದಲ್ಲಿ ಕತೆ  ದಾರಿ ತಪ್ಪದ ಹಾಗೆ ಸರಿಯಾಗಿ ಕರೆದೊಯ್ಯುವವರು ಭಾಗವತರು. ಕತೆಯ ಲೋಕ ಬಿಚ್ಚಿಡುತ್ತಾ ಒಳ ನೋಟ ನಮಗೆ ಬಿಡುತ್ತಾ ಅಲ್ಲಲ್ಲಿ ದಾರಿ ತೋರಿಸುತ್ತಾ ಇಡೀ ಪ್ರಸಂಗದ ದರ್ಶನ ಮಾಡಿಸುವವರು ಅವರು. ಅಷ್ಟೇ ವಿಸ್ಮಯವಾದ ಸಾಹಿತ್ಯ ಲೋಕದ ಭಾಗವತರು ಕೆ.ವಿ ತಿರುಮಲೇಶ್ ಸರ್. ಅಂತದೊಂದು ಪ್ರಸಂಗ

ಅಶ್ವತ್ಥಾಮನ್

 ಬಾಲ್ಯ ಸರಿಯಿಲ್ಲದ ಮಕ್ಕಳಿಗೆ ಸಮಾಜದ ಬಗೆಗೆ ಒಂದು ಅವ್ಯಕ್ತ ಅಸಹನೆ ಇರುತ್ತದೇನೋ. ಹಲವರಿಗೆ ಅವಕಾಶ ಸಿಕ್ಕಾಗ ಅದು ವ್ಯಕ್ತವಾಗಬಹುದು. ತಾವು ಅನುಭವಿಸಿದ ಅವಮಾನ, ಆಕ್ರೋಶ ಇವುಗಳನ್ನು ಹೊರಹಾಕಲು ತಮ್ಮದೇ ದಾರಿಗಳನ್ನು ಕಂಡುಕೊಳ್ಳುತ್ತಾರೆ. ಯಾರನ್ನೋ ಮೆಚ್ಚಿಸುವ ಎನ್ನುವುದಕ್ಕಿಂತ ಎದುರಿನವರ ಕಣ್ಣಲ್ಲಿ ಹೀರೋ ಅನ್ನಿಸಿಕೊಳ್ಳುವ ಮನೋಭಾವ ಸುಪ್ತವಾಗಿರುತ್ತದೇನೋ. ಇಂಥದೊಂದು ಕಾರಣಕ್ಕೆ ದುರ್ಯೋಧನನ ಕಣ್ಣಲ್ಲಿ ಹೀರೋ ಆಗುವುದಕ್ಕೆ ಅಧರ್ಮ ಎಂದೂ ಗೊತ್ತಿದ್ದೂ ಆ ಅಶ್ವತ್ಥಾಮ ಅರ್ಧರಾತ್ರಿಯಲ್ಲಿ ಎದ್ದು ಹೊರಟನಾ...  ಜೋಗಿಯವರ ಈ ಅಶ್ವತ್ಥಾಮನೂ ಹೀಗೆ. ತನ್ನ ತಾಯಿಗೆ ತನ್ನ ತಂದೆಯೆಂಬ ವ್ಯಕ್ತಿಯಿಂದಾದ ಮೋಸಕ್ಕೆ ಸೇಡು ತೀರಿಸಿಕೊಳ್ಳಲು ಹೊರಟನೇನೋ ಅನ್ನಿಸುತ್ತದೆ. ತಾಯಿಯ ನಂಬಿಕೆಗೆ ಪೆಟ್ಟು ಬಿದ್ದ ಫಲವೇನೋ ಎಂಬಂತೆ ಯಾರನ್ನೂ ನಂಬದ ಎಲ್ಲರನ್ನೂ ನಂಬಿದಂತೆ ನಟಿಸುವ ಆತ ಅದ್ಭುತ ನಟ. ಆದರೆ ಆ ನಟನೆ ಎಲ್ಲಿಂದ ಆರಂಭವಾಗಿ ಎಲ್ಲಿ ಮುಗಿಯುತ್ತದೆ ಎನ್ನುವುದು ಕೊನೆಯವರೆಗೂ ಕಾಡುವ ಹಾಗೆ ಬರೆದಿರುವ ಶೈಲಿ ಮಾತ್ರ ಬಹಳ ಚೆಂದ. ಇದು ಕಾದಂಬರಿಯ, ಸ್ವಗತವಾ , ಯಾರದ್ದೋ ಆತ್ಮಕತೆಯ ನಿರೂಪಣೆಯಾ.. ಕಾವ್ಯವಾ ಲಲಿತ ಪ್ರಬಂಧವಾ ಅಥವಾ ಅವೆಲ್ಲವೂ ಒಟ್ಟು ಸೇರಿದ ಹೊಸದೊಂದು ಬಗೆ ಹುಟ್ಟಿದಿಯಾ ಎನ್ನುವ ಆಲೋಚನೆ ಕಾಡುತ್ತಲೇ ಓದಿಸಿಕೊಂಡು ಹೋಗುತ್ತದೆ. ನಿರೂಪಕನಾಗಿ, ಪಾತ್ರವಾಗಿ ಮೂರನೆಯ ವ್ಯಕ್ತಿಯಾಗಿ ಜೋಗಿ ಕೂಡಾ ಇಡೀ ಕಾದಂಬರಿಯಲ್ಲಿ ಅಶ್ವತ್ಥಾಮನಿಗಿಂತಲೂ ಅದ್ಭುತವಾ

ಕೊಟ್ಟಿಗೆಯ ಆಕರ್ಷಣೆ

ಬೆಳಗಾಗುತ್ತಿದ್ದದ್ದೇ ಅವುಗಳ ಅಂಬಾ ಎನ್ನುವ ದನಿಯಿಂದ. ಕಣ್ಣುಜ್ಜಿಕೊಂಡು ಹೊರಗೆ ಬರುವ ಹೊತ್ತಿಗೆ ಅಜ್ಜಿ ಅವುಗಳೊಂದಿಗೆ ಮಾತಾಡುತ್ತಾ ಹಾಲು ಕರೆಯುತ್ತಲೋ ಇಲ್ಲಾ ಅವುಗಳಿಗೆ ಕುಡಿಯಲು ಕೊಡುತ್ತಲೋ ಇರುತ್ತಿದ್ದಳು. ನಿಂಗೆ ಮಾತಿಗೆ ಒಂದು ಜೀವ ಅಂತ ಇದ್ರೆ ಸಾಕು ಅಲ್ವ ಮತ್ತೆ ನಂಗೆ ಹೇಳ್ತಿ ಕಲ್ಲನಾದ್ರು ಮಾತಾಡಿಸುತ್ತೆ ಇದು ಅಂತ ಗೊಣಗುತ್ತಲೇ ಬಚ್ಚಲಿನತ್ತ ಹೋಗುತ್ತಿದ್ದೆ. ಅವಳು ಏನು ಹೇಳುತ್ತಿದ್ದಳೋ ಕೇಳಲು ಅಲ್ಲಿದ್ದರೆ ತಾನೇ... ಅವಳಪ್ಪ ತೀರಿಕೊಂಡ ನಂತರ ಊರಿನಲ್ಲಿದ್ದ ಕೊನೆಯ ತಮ್ಮ ತೋಟದ ಮನೆಗೆ ಹೋಗುವಾಗ ಮನೆಯಲ್ಲಿದ್ದ ದನಕರುಗಳನ್ನು ಇವಳಿಗೆ ಕೊಟ್ಟಿದ್ದ. ತವರಿನಿಂದ ಏನೂ ತಾರದ  ಅವಳು ಇವುಗಳನ್ನು ಮಾತ್ರ ಹೊಡೆದು ತಂದಿದ್ದಳು. ಅದರಲ್ಲೊಂದು ದನ ಕಡುಗಪ್ಪು. ಆದರೆ ಹಣೆಯಲ್ಲಿ ಮಾತ್ರ ಬೆಳ್ಳನೆಯ ಬೊಟ್ಟು. ಚಂದ್ರಿ ಅಂತ ಅದಕ್ಕೆ ಹೆಸರಿಟ್ಟಿದ್ದಳು. ತುಂಬಾ ಸಾಧು. ಹೇಳಿದ ಮಾತು ಅರ್ಥ ಆಗುತ್ತೇನೋ ಅನ್ನುವ ಹಾಗೇ ಅದರ ವರ್ತನೆ. ಕೊಟ್ಟಿಗೆಯ ತುಂಬಾ ತುಂಬಿಕೊಂಡಿದ್ದ ಅವುಗಳನ್ನು ನೋಡುವುದೇ ಅವಳಿಗೆ ಸಂಭ್ರಮ. ಅವುಗಳ ಆರೈಕೆ, ಬಾಣಂತನ, ಪುಟ್ಟ ಕರುಗಳಿಗೆ ತುತ್ತು ತಿನ್ನಿಸುವುದು ಅವಳ ಇಷ್ಟದ ಕೆಲಸಗಳು. ಪುಟ್ಟ ಕರುವಿನ ಬಾಯಿ ಇಷ್ಟೇ ತೆಗೆದು ಮೃದುವಾಗಿ ಕಲಿಸಿದ ಅನ್ನ ತಿನ್ನಿಸುವುದು ನೋಡುತ್ತಿದ್ದವಳನ್ನು ಕರೆದು ಹೇಗೆ ತಿನ್ನಿಸಬೇಕು, ಹಾಗೆ ಹಿಡಿಯಬೇಕು ಅನ್ನುವುದು ಕಲಿಸಿದ್ದಳು. ಆಮೇಲೆ ನನಗದು ಇಷ್ಟದ ಕೆಲಸ. ಮಗುವಿಗೆ ತಿನ್ನಿಸಿದ ಹಾಗೆ ಧ