ಶ್ರಾವಣ (Vijayakarnataka 29.07.19)

ಇನ್ನೇನು ಶ್ರಾವಣ ಬಂತು ಎಂದು ಅಜ್ಜಿ ಹೇಳುವ ಹೊತ್ತಿಗೆ ಚಿಕ್ಕಿಯ ಮುಖ ಕೊಂಚ ಕೆಂಪಾಗಿದ್ದು ಯಾಕೆ ಎಂದು ಯೋಚಿಸುವ ಹೊತ್ತಿಗೆ ರೇಡಿಯೋದಲ್ಲಿ ಶ್ರಾವಣ ಮಾಸ ಬಂದಾಗ ಆನಂದ ತಂದಾಗ ವಿರಹಗೀತೆ ಇನ್ನಿಲ್ಲ ಪ್ರಣಯಗೀತೆ ಬಾಳೆಲ್ಲ ಎನ್ನುವ ಹಾಡು ಶುರುವಾಗಿತ್ತು. ಶ್ರಾವಣ ಎಂದರೆ ಸಂತಸ ಅಡಿಯಿಡುವ ಹೊತ್ತು. ಅವಳಿಗೋ ಮರಳುವ ತವಕ, ನಮಗೋ ಹಬ್ಬಗಳ ಸಾಲು ಸಾಲು ಹೊತ್ತು ತರುವ ಸಿಹಿಯ ಕನಸು, ಹೆಂಗಸರಿಗೆ ವ್ರತ, ಪೂಜೆ ನೇಮಗಳಿಗೆ ಸಿದ್ಗಧರಾಗುವ ಗಡಿಬಿಡಿ. ಗಂಡಸರಿಗೆ ವ್ಯವಸಾಯ ಕೆಲಸಗಳು ಮುಗಿದ ನಿರಾಳ ಭಾವ. ಒಟ್ಟಿನಲ್ಲಿ ಶ್ರಾವಣ ಎಂದರೆ ಸಂಭ್ರಮ, ಶ್ರಾವಣ ಎಂದರೆ ಭಕ್ತಿ, ಶ್ರಾವಣ ಎಂದರೆ ಸಿಹಿಯೂಟ. ಶ್ರಾವಣ ಎಂದರೆ ಸಮಾಧಾನ,  ಶ್ರಾವಣ ಎಂದರೆ ಧಾರ್ಮಿಕ ಆಚರಣೆಗಳ ಶುರುವಾತು. ಬಾಲ್ಯ ಕಳೆದು, ಹರೆಯದ ಹುಮ್ಮಸ್ಸು ದಾಟಿ ಬಂದು ಈಗ ದಿಟ್ಟಿಸಿದರೆ ಶ್ರಾವಣ ಎಂದರೆ ನವವಧುವಿನಂತೆ ಕಾಣಿಸುತ್ತದೆ. ಮೈ ಮನಗಳಲ್ಲಿ ಪುಳಕ ಹುಟ್ಟಿಸುತ್ತದೆ.

ಮಳೆಯನಾಡು ತೊಯ್ಯುತಿರೆ, ಮಂಜಿಗಿರುಳು ಬೆದರುತಿರೆ
ಸೋನೆ ತಿರೆಯು ತೊಯ್ಯುತಿರೆ ಮಿಂಚೆ ತಿಮಿರ ನಡುಗುತಿರೆ
ಮುದವು ಮೊಳೆದು ನಮೆವುದು .... ಎಂಬ ಪುತಿನ ಸಾಲುಗಳಂತೆ

ಮಲೆನಾಡಿನ ಮಳೆಯೇ ಹಾಗೆ, ಸುರಿದರೆ ಸುರಿಯುತ್ತಲೇ ಇರುತ್ತದೆ. ರಚ್ಚೆ ಹಿಡಿದ ಮಗುವಿನಂತೆ, ಮುನಿಸಿಕೊಂಡ ಮುಗುದೆಯಂತೆ. ಅದರಲ್ಲೂ  ಆಷಾಢದ ಭೋರುಗಾಳಿ, ಅಬ್ಬರದ ಮಳೆ ಹುಚ್ಚು ಹಿಡಿಸಿಬಿಡುತ್ತದೆ. ಶ್ರಾವಣ ಬರುವ ಹೊತ್ತಿಗೆ  ಫಾರ್ಮ್ ಕಂಡುಕೊಂಡ ಆಟಗಾರನ ಹಾಗೆ, ಶೃತಿ ಸಿಕ್ಕಿದ ಹಾಡುಗಾರನ ಹಾಗೆ ತನ್ನ ಲಯ ಕಂಡುಕೊಳ್ಳುತ್ತದೆ. ಬೀಸಿ ಬೀಸಿ ಸುಸ್ತಾದ ಗಾಳಿ ಸುಧಾರಿಸಿಕೊಂಡು, ಮದ್ದಾನೆಯ ಹಿಂಡಿನ ಹಾಗೆ ದಟ್ಟೈಸಿದ  ಮೋಡ ಚದುರಿ ಮಬ್ಬು ಬೆಳಕು ಹರಿಯುತ್ತದೆ. ಕರೆದೊಯ್ಯಲು ಇನಿಯಾ ಬಂದನಾ ಎಂದು ದಿಟ್ಟಿಸುವ ನವ ವಧುವಿನ ಹಾಗೆ ಬೆಳಕು ಮೆಲ್ಲಗೆ  ಹಣಕಿ ನೋಡುತ್ತದೆ.  ಮಂದ್ರ ಸ್ವರ ಅಭ್ಯಾಸ ಮಾಡುವ ಸಂಗೀತಗಾರರ  ಹಾಗೇ ಸುರಿಯುವ ಜಿಟಿ ಜಿಟಿ ಮಳೆ ಶೃತಿಯೊಡನೆ ಒಂದಾದ ಹಾಗೆ ಏಕವಾಗಿ ಸುರಿಯುತ್ತಿರುತ್ತದೆ. ಆಷಾಢದ ರಭಸ ಮಳೆಗೆ ಕೊಚ್ಚಿ ಹೋಗುವ  ಮಣ್ಣಿನ ಮೇಲ್ಮೆ ನೀರಿನ ಜೊತೆಗೆ ಸೇರಿ ಕೆಂಪು ಕೆಂಪಾಗಿ ಹರಿಯುತ್ತಿರುತ್ತದೆ. ಶ್ರಾವಣದಲ್ಲಿ  ಅವೆಲ್ಲಾ ಮಾಯವಾಗಿ  ಸಣ್ಣಗಿನ ತಿಳಿ ಜಲ ಜುಳು ಜುಳನೆ ಹರಿಯುತ್ತದೆ. ಆಷಾಢ ರಭಸವಾದರೆ ಶ್ರಾವಣ ಶೃತಿಯಾದ ತಂಬೂರಿಯಂತೆ  ಶಾಂತ.  ಗೌರಿ ಪೂಜೆಗೆ ಕುಳಿತ ವಧುವಿನಂತೆ ಸ್ನಿಗ್ಧ..

ಕಾದು ಕಾದು ಬಸವಳಿದ ಇಳೆ, ವಿರಹದ ಮಳೆ ಎರಡೂ ಶಾಂತವಾಗಿ, ಧರೆಯೂ ತೃಪ್ತಳಾಗಿ ಧೂಳು, ಕೊಳೆ ಎಲ್ಲವನ್ನೂ ಕಳೆದುಕೊಂಡು ಹಸಿರು ಕಂಗೊಳಿಸುತ್ತಿರುತ್ತದೆ. ಗುಡ್ಡ ಬೆಟ್ಟ, ತರು ಲತೆ ಎಲ್ಲವೂ ಅಭ್ಯಂಗಮಾಡಿ ಶುದ್ಧವಾದಂತೆ, ಅಭಿಷೇಕ ಮಾಡಿದ ವಿಗ್ರಹದಂತೆ ಅದಕ್ಕಿಂತ ಹೆಚ್ಚಾಗಿ  ಆಗಷ್ಟೇ ಮಂಗಳಸ್ನಾನ ಮುಗಿಸಿಬಂದ ವಧುವಿನಂತೆ ಕಳೆಕಳೆಯಾಗಿ ಕಾಣಿಸುತ್ತದೆ. ಏನೋ ಹೊಸತನ, ವಿವರಿಸಲಾಗದ ನಾವೀನ್ಯ..   ಅದು ದಟ್ಟ ಹಸಿರಲ್ಲ, ಮಾಸಲ ಹಸಿರೂ ಅಲ್ಲ. ನಳ ನಳಿಸುವ ಮೃದು ಮಧುರ ಹಸಿರು.   ಕಣ್ಣ ತಂಪುಗೊಳಿಸುವ ಹಸಿರು. ಆಹ್ಲಾದ ತುಂಬುವ ಹಸಿರು, ನಾಟಿ ಮಾಡಿದ ಸಸಿಗಳು ಬೇರೂರಿ ಬೆಳೆಯುವ ಹಸಿವು ನೀಗುವ ಹಸಿರು.  ದೈವಿಕ ಹಸಿರು ಅಂದರೂ ತಪ್ಪಾಗಲಾರದೇನೋ.  ಇಡೀ ಮಾಸವೇ ಹಾಗೆ ವ್ರತ, ಹಬ್ಬ, ಆಚರಣೆಗಳಿಂದ ತುಂಬಿದ ಮಾಸ. ಪುರಾಣ, ಹರಿಕತೆ ನಡೆಯುವ ಮಾಸ. ಶ್ರಾವಣ ಅಂದರೆ ಶ್ರವಣ. ಅದು ಕೇಳಿಸಿಕೊಳ್ಳುವ, ಕೇಳಿದ್ದನ್ನು ಮನನ ಮಾಡಿಕೊಳ್ಳುವ ಕಾಲ. ನವ ವಧೂವರರಲ್ಲಿ ಪಾರ್ವತಿ ಪರಮೇಶ್ವರು ಆವಾಹಿತರಾಗಿರುತ್ತಾರೆ ಎಂದು ನಂಬಿ ಧಾರೆಯೆರೆದು ಕೊಡುವ ಧನ್ಯತೆ.  ಹಾಗಾಗಿ ಶ್ರಾವಣ ಎಂದರೆ ಪಾವಿತ್ರ್ಯ..

 ಅಂಜಿಕೆ, ಉನ್ಮಾದ, ರಭಸ ಎಲ್ಲವನ್ನೂ ಕಳೆದುಕೊಂಡು ಹದಗೊಂಡ ಶ್ರಾವಣ ಎರಡು ದಡಗಳ ನಡುವೆ ತುಂಬಿ ಹರಿಯುವ ನದಿಯಂತೆ. ದಡ ಮೀರದ ಗಾಂಭೀರ್ಯ, ವಿನಯವಂತಿಕೆ ಜೊತೆಗೆ ಧೀಮಂತಿಕೆ. ಆಷಾಢದ ವಿರಹದಲ್ಲಿ ಮನಸ್ಸು ಬೆಂದರೂ ಉಬ್ಬರ ಇಳಿತಗಳೆರಡೂ ಕಂಡ ಶಾಂತ ಸಮುದ್ರಂತೆ ಹದವಾಗಿರುತ್ತದೆ. ಮೊಳಕೆಯೊಡೆದು ಬೆಳೆಯಲು ಅನುವಾಗಿರುತ್ತದೆ.  ಶ್ರಾವಣ ಅಂದರೆ ಸೃಷ್ಟಿಶೀಲತೆ. ಕಣ್ಣು ಹರಿಸಿದೆಡೆಯೆಲ್ಲಾ ಅದು ಕಾಣಿಸುತ್ತದೆ. ಸೂರಂಕಣದ ಬದಿಯಲ್ಲಿ, ಚಪ್ಪರದ ಕಲ್ಲುಕಂಬದ ಅಡಿಯಲಿ ಹೂ ಬಿಟ್ಟ ಡೇರೆ, ಮೈತುಂಬಾ ಹೂ ಅರಳಿಸಿಕೊಂಡ ಸೇವಂತಿಗೆ, ಒಂದೊಂದೇ ಪಕಳೆ ಅರಳಿಸಿ ನಗುವ ಅಂಗಳದ ನಡುವಿನ ಗುಲಾಬಿ, ಬೇಲಿಯ ಸಾಲಿನಲ್ಲಿ ತೊನೆದು ತೂಗಾಡುವ ದಾಸವಾಳ, ಸೀರೆಯ ತುಂಬಾ ಅಲ್ಲೊಂದು ಇಲ್ಲೊಂದು ಕಾಣುವ ಚಿತ್ತಾರದ ಹಾಗೆ ಅಂಗಳದ ಮೈತುಂಬಾ ಅಲ್ಲೊಂದು ಇಲ್ಲೊಂದು ಪಕ್ಕನೆ ಅರಳಿರುವ ಹೆಸರೇ ಇಲ್ಲದ ಬಣ್ಣ ಬಣ್ಣದ ಹೂಗಳು, ತಲೆಯೆತ್ತಿ ನಿಂತಿರುವ ತೇರು ಹೂ, ಹಿತ್ತಿಲಿನ ಕಾಬಾಳೆ ಹೂ, ಸಣ್ಣಗೆ ಬೀಸುವ ಗಾಳಿಯ ಜೊತೆಗೆ ಕಂಪಿನ ಸುದ್ದಿ ಕಳಿಸುವ ಕೇದಿಗೆ ಹೂ...

ಹೂವ ಹಡಗಲಿಯ ಹೊತ್ತ
ಭೂಮಿತಾಯಿ ಜೋಗಿತಿ
ಮೈ ತುಂಬಿ ಕುಣಿಯುತಿಹಳ
ನಂತ ಕಾಲವೀ ಗತಿ  ಎನ್ನುವ ಬೇಂದ್ರೆಯವರ ಸಾಲುಗಳಂತೆ ಇಡೀ ಪ್ರಕೃತಿ ಪುಷ್ಪಮಯ. ಇನಿಯನ ಕಂಡು ರಂಗೇರುವ ವಧುವಿನ ಹಾಗೆ ವರ್ಣಮಯ. ಸಪ್ತಪದಿ ತುಳಿದು ಹೋಮ ಮುಗಿಸಿ ಎದ್ದ ಮದುಮಗಳ ದಿವ್ಯತೆ. ಸ್ಮಶಾನವಾಸಿಯನ್ನು ಕೈಲಾಸವಾಸಿಯಾಗಿಸಿದ ಪಾರ್ವತಿಯ ಧನ್ಯತೆ.

ಕಾದು ಬಸವಳಿದ ಇಳೆ ಆಷಾಢದ ಮಳೆಗೆ ತೋಯ್ದು, ಬಿರಿದು ನೆಂದು ಶಾಂತವಾಗುವ ಹೊತ್ತಿಗೆ ಶುರುವಾಗುವ ಶ್ರಾವಣದ ಮಳೆ ಜಿನುಗುವ ಮಳೆ ಇಳೆಯ ಒಡಲು ಸೇರಿ ತುಂಬಿಕೊಳ್ಳುತ್ತಾ ಹೋಗುತ್ತದೆ. ಸಣ್ಣ ಮಳೆಯ ಒಂದೊಂದು ಹನಿಯೂ ಇಂಗುತ್ತಾ ಹಸಿಯಾಗಿಸುತ್ತಾ ಅಂತರ್ಜಲ ಹೆಚ್ಚಿಸುತ್ತದೆ.  ಹಾಗೆ ಹಾಗೆ ಒಡಲು ತುಂಬಿಕೊಂಡ ಇಳೆ ಜಲ ಚಿಮ್ಮಿಸುತ್ತದೆ. ಕಲ್ಲು ಪೊಟರೆಯ ಸಂದಿನಲ್ಲಿ, ಕಾಲು ಹಾದಿಯ ಧರೆಯ ಮೂಲೆಯಲ್ಲಿ, ಜುಳು ಜುಳು ಹರಿಯವ ತೊರೆಯ ಬದಿಯಲ್ಲಿ,  ಬೇಲಿ ಬದಿಯ ಹೂವಿನ ಗಿಡದ ಅಡಿಯಲ್ಲಿ ಶುದ್ಧ ಸ್ಪಟಿಕ ಜಲ ಒಡೆದು ಸದ್ದಿಲ್ಲದೇ ಹರಿಯುವುದು ಕಾಣಿಸುತ್ತದೆ.  ಶ್ರಾವಣದ ಶ್ರವಣ ಕೇಳಿದ ಮನಸ್ಸು ಹೀಗೆ ಹೊಸ ಆಲೋಚನೆಗಳನ್ನು  ಸೃಷ್ಟಿಸುತ್ತದೆ. ಹೊಸ ನೋಟ, ಹೊಸ ದಾರಿ, ಹೊಳೆಯುತ್ತದೆ. ಮನಸ್ಸು ತಿಳಿಯಾಗುತ್ತದೆ.  ಹೊಸ ಜಲ, ಹೊಸ ಭಾವ, ಕೊಳೆ ತೊಳೆದುಕೊಂಡ ಶುದ್ಧ ತರು ಲತೆ ಕನ್ಯಾದಾನವಾದ ಮೇಲೆ ಹೋಮಕ್ಕೆ ಕುಳಿತು ಮೂಗಿಗೆ ಗರಿಕೆ ರಸವನ್ನು ಹಾಕಿಸಿಕೊಂಡು ಸಿದ್ಧಳಾದ, ಪವಿತ್ರಳಾದ ಮದುಮಗಳಂತೆ... ಶ್ರಾವಣ ಅಂದರೆ ಶುದ್ಧತೆ..

ಶ್ರಾವಣ ಎಂದರೆ ಬರೆದಷ್ಟೂ ಮುಗಿಯದ ಅಕ್ಷಯ ಪಾತ್ರೆ.. ತೋಡಿದಷ್ಟೂ ಒಸರುವ ಜಲದ ಹಾಗೆ. ನೆಂದೂ ನೆಂದೂ ತಲೆ ಬಾಗಿಸಿ ನಿಂತ ಡೇರೆಯ ಹೂ ಮಳೆ ನಿಂತ ಮೇಲೆ ಪಕಳೆಯ ನಡುವೆ ಹಿಡಿದಿಟ್ಟ ಒಂದೊಂದೇ ಹನಿಯ ಜಾರಿಸುವ ಹಾಗೆ, ನವ ವಧು ವರರ ಬೊಗಸೆಯಲ್ಲಿ ಧಾರೆಯೆರೆದ ನೀರು ಒಂದೊಂದೇ ಹನಿ ಹನಿಯಾಗಿ ಇಳಿದು ಒದ್ದೆಯಾಗಿಸುವ ಹಾಗೆ  ಶ್ರಾವಣ ತೇವವಾಗಿಸುತ್ತದೆ, ಹದವಾಗಿಸುತ್ತದೆ, ಶುದ್ಧವಾಗಿಸುತ್ತದೆ, ಇಂಗಿಸುತ್ತದೆ, ತುಂಬಿಸುತ್ತದೆ, ಹೊಸತಾಗಿಸುತ್ತದೆ. ಎಲ್ಲಕ್ಕಿಂತ ಹೆಚ್ಚಾಗಿ ಮುಂಜಾವಿನಲಿ ಮಿಂದು ಬಂದು ತುಳಸಿಯ ಕುಂಕಮ ಹಣೆಗಿಟ್ಟ ಪಾರ್ವತಿ ಪರಮೇಶ್ವರನಲ್ಲಿ ಮೂಡಿಸುವ ಪುಳಕದಂತೆ ಕಾಡುತ್ತದೆ. ಬದುಕಿಗೆ ಬಣ್ಣ ತುಂಬುತ್ತದೆ.
.

Comments

Popular posts from this blog

ಮಾತಂಗ ಪರ್ವತ

ರಂಜದ ಹೂ

ಬರಿದೆ ಆಡುವ ಮಾತಿಗರ್ಥವಿಲ್ಲ...