ಬಾದಾಮಿಯನ್ನು ವಾಣಿಜ್ಯನಗರಿಯನ್ನಾಗಿಸಿ ಕೊಂಡ ಚಾಲುಕ್ಯರ ಚಿತ್ತ ನಂತರ ಹರಿದಿದ್ದು ಪಟ್ಟದಕಲ್ಲು ಕಡೆ. ಅದಕ್ಕೆ ಕಿಸುವೊಳಲ್ ಅಥವಾ ರಕ್ತಪುರ ಅಂತ ಕರೆಯಲಾಗುತ್ತಿತ್ತು. ಅಲ್ಲಿನ ಕೆಂಪು ಮಣ್ಣು ಹಾಗೂ ಕಲ್ಲುಗಳ ಬಣ್ಣವೂ ಕೆಂಪಾಗಿದ್ದರಿಂದ ಈ ಹೆಸರಿನಿಂದಲೇ ಪ್ರಸಿದ್ದಿಯಾಗಿತ್ತು. ಇಲ್ಲಿ ಮಲಪ್ರಭಾ ಉತ್ತರವಾಹಿನಿ..ಹಾಗಾಗಿ ಇದನ್ನು ಪವಿತ್ರ ಸ್ಥಳ ಅಂತ ಭಾವಿಸಿದ ಚಾಲುಕ್ಯ ರಾಜರು ತಮ್ಮ ಪಟ್ಟಾಭಿಷೇಕವನ್ನು ಇಲ್ಲಿಯೇ ಮಾಡಿಕೊಳ್ಳುತ್ತಿದ್ದರಂತೆ. ಹಾಗಾಗಿ ಕ್ರಮೇಣ ಇದು ಪಟ್ಟದಕಲ್ಲು ಎಂದು ಪ್ರಸಿದ್ದಿಯಾಗಿದ್ದು.

ಈ ವೇಳೆಗೆ ತಮ್ಮ ಸಾಮ್ರಾಜ್ಯವನ್ನು ವಿಸ್ತರಿಸಿ ಪ್ರಬಲರಾಗಿದ್ದ ಚಾಲುಕ್ಯರ ತಮ್ಮ ಗಮನವನ್ನು ವಾಸ್ತುಶಿಲ್ಪದ ಕಡೆ ಸಂಪೂರ್ಣವಾಗಿ ಹರಿಸಿದ್ದರಿಂದ ಮತ್ತು ಅದಕ್ಕೆ ಪಟ್ಟದಕಲ್ಲನ್ನೇ ಆರಿಸಿಕೊಂಡಿದ್ದರಿಂದ ಇದು ಸಾಂಸ್ಕೃತಿಕ ನಗರಿಯಾಗಿ ಬೆಳವಣಿಗೆ ಹೊಂದಿದೆ. ಈಗ ವಿಶ್ವ ಪಾರಂಪರಿಕ ಪಟ್ಟಿಗೆ ಸೇರಿರುವುದರಿನ ರಕ್ಷಣೆಯೂ ದೊರಕಿದೆ. ಐಹೊಳೆ, ಬಾದಾಮಿಯನ್ನು ನೋಡಿ ಸಂಕಟಪಟ್ಟು ಇಲ್ಲಿ ಬಂದರೆ ಸಂತಸದ ತಂಗಾಳಿ ಸ್ಪರ್ಶಿಸಿ ಮುದಗೊಳಿಸುತ್ತದೆ. ಬೇರೊಂದು ಲೋಕಕ್ಕೆ ಬಂದ ಅನುಭವವಾಗುತ್ತದೆ.

ಪಲ್ಲವರ ಅಧೀನದಲ್ಲಿದ್ದ ಸಾಮ್ರಾಜ್ಯವನ್ನು ಪುನಃ ಪ್ರತಿಷ್ಟಾಪಿಸಿದ ಕೀರ್ತಿಗೆ ಭಾಜನನಾದ ವಿಕ್ರಮಾದಿತ್ಯ ಶೈವ ಧರ್ಮವನ್ನು ಸ್ವೀಕರಿಸಿದ್ದರಿಂದ ಇಲ್ಲಿ ಎಲ್ಲವೂ ಶಿವನ ದೇವಾಲಯಗಳೇ ನಿರ್ಮಾಣವಾಗಿದೆ. ಪಲ್ಲವರ ಮೇಲೆ ಗೆದ್ದ ಕುರುಹಾಗಿ ಆತ ಇಲ್ಲಿ ವಿಜಯಸ್ತಂಭವನ್ನು ನಿರ್ಮಿಸಿದ್ದಾನೆ. ಅವನ ಗೆಲುವಿನ ಕೊಡುಗೆಯಾಗಿ ಅವನ ಇಬ್ಬರು ರಾಣಿಯರು ಅದಕ್ಕೆ ಎದುರಾಗಿ ವಿರೂಪಾಕ್ಷ ದೇವಾಲಯ ಹಾಗೂ ಮಲ್ಲಿಕಾರ್ಜುನ ದೇವಾಲಯವನ್ನು ನಿರ್ಮಿಸಿದ್ದಾರೆ. ಇಲ್ಲಿ ಉತ್ತರಭಾರತದ ರೇಖಾನಾಗರ ಶೈಲಿ ಹಾಗೂ ದ್ರಾವಿಡಶೈಲಿ ಎರಡೂ ಇವೆ. ಅಲ್ಲಲ್ಲಿ ಶಾಸನಗಳೂ ಇವೆ. ಒಟ್ಟಿನಲ್ಲಿ ಚಾಲುಕ್ಯರ ಸಾಂಸ್ಕೃತಿಕ ಕೊಡುಗೆ ಇಲ್ಲಿ ಅಭಿವ್ಯಕ್ತವಾಗಿದೆ.

ದೇವಸ್ಥಾನದ ಒಳಗೆ ರಾಮಾಯಣ, ಮಹಾಭಾರತ, ಪಂಚತಂತ್ರದ ಕತೆಗಳು ಕೆತ್ತಲ್ಪಟ್ಟಿದೆ. ದೇವಸ್ಥಾನಗಳೆಂದರೆ ಕೇವಲ ಶ್ರಧ್ಹಾ ಕೇಂದ್ರಗಳು ಮಾತ್ರವಲ್ಲ ಜ್ಞಾನಕೇಂದ್ರಗಳೂ ಹೌದು. ಕಟ್ಟಡದ ವಿನ್ಯಾಸ, ಅಲ್ಲಿದ್ದ ಕೆತ್ತನೆಗಳು, ಅಲ್ಲಿನ ವಾಸ್ತು ಕ್ಷಣಮಾತ್ರವಾದರೂ ಹೋದವರಿಗೆ ಅಂತರ್ಮುಖರನ್ನಾಗುವಂತೆ ಮಾಡುತ್ತಿತ್ತೇನೋ. ಶತಮಾನಗಳು ಕಳೆದರೂ ಇಂದಿಗೂ ರಾಮಾಯಣ ಹಾಗೂ ಮಹಾಭಾರತ ಎಷ್ಟು ಪ್ರಸ್ತುತ ಮತ್ತು ಜೀವಂತ ಅನ್ನೋದೂ ಅರ್ಥವಾಗುತ್ತೆ. ದರ್ಶನಕ್ಕೆ ಬಂದವರಿಗೆ  ಮೌಲ್ಯಗಳನ್ನೂ ಮೌನವಾಗಿಯೇ ಕಲಿಯುವ ಅವಕಾಶ.

ಇಷ್ಟೇ ಅಲ್ಲಾ ಇಲ್ಲಿ ಅವರು ಎಷ್ಟು ಆಧುನಿಕ ಮನೋಭಾವದವರಾಗಿದ್ದರು ಅನ್ನುವುದಕ್ಕೂ ಸಾಕಷ್ಟು ಪುರಾವೆಗಳಿವೆ. ಅಲ್ಲಿನ ಜನರು ಎಷ್ಟು ಅಲಂಕಾರ ಪ್ರಿಯರಾಗಿದ್ದರು ಅನ್ನುವುದಕ್ಕೆ ಅಲ್ಲಿನ ಕೆತ್ತನೆಗಳಲ್ಲಿ ಬಗೆ ಬಗೆಯ ಕೇಶವಿನ್ಯಾಸಗಳು, ವೈವಿಧ್ಯಮಯ ಡ್ರೆಸ್ ಗಳೂ ಕಾಣಸಿಗುತ್ತದೆ. ಆಭರಣಗಳ ಡಿಸೈನ್ ನೋಡಲೆಂದೇ ಆಭರಣ ತಯಾರಕರು ಬರುತ್ತಾರಂತೆ. ಆಗಿನ ಕಾಲದಲ್ಲೇ ಚಿಕ್ಕದಾದ ಮಾಂಗಲ್ಯ ಸರಗಳು, ಮಿನಿ, ಮಿಡಿ, ಬಿಕಿನಿಗಳೂ ಇದ್ದವೆಂಬುದಕ್ಕೆ ಅಲ್ಲಿನ ಶಿಲ್ಪಗಳಲ್ಲಿ ನಿದರ್ಶನ ಸಿಗುತ್ತದೆ. ಹಾಗಾದರೆ ನಾವು ಹೊಸದಾಗಿ ಕಂಡು ಹಿಡಿದಿದ್ದೇನು ಅನ್ನುವದಕ್ಕೆ ಮೌನವಷ್ಟೇ ಉತ್ತರ.

ಬಗೆಬಗೆಯ ನೃತ್ಯ ಪ್ರಕಾರಗಳೂ, ಭಂಗಿಗಳು ಇದ್ಯಾವುದೂ ಇವತ್ತಿಗೆ ಹೊಸತಲ್ಲವೇ ಅಲ್ಲ. ಎಲ್ಲವೂ ಇಲ್ಲಿ ಇದ್ದಿದ್ದೇ, ಮತ್ತಲ್ಲೇ ಇರುತ್ತದೆ ಸಹ. ಏನೂ ಇಲ್ಲದೆ ಬಂದ ನಾವು ಇಲ್ಲಿರುವುದನ್ನ ಮಾತ್ರವೇ ಬಳಸಿಕೊಳ್ಳಬಲ್ಲವೇ ವಿನಃ ಹೊಸತೇನನ್ನು ಸೃಷ್ಟಿಸಲಾರೆವು,  ಬೆಳೆಸಲಾರೆವು ಕೇವಲ ಅಹಂ ಮಾತ್ರವನ್ನೇ ಧರಿಸಬಲ್ಲೆವು ಅಷ್ಟೇ ಅನ್ನೋದು ಒಂದು ಸುತ್ತು ಬರುವುದರೊಳಗೆ ಅರ್ಥವಾಗಿರುತ್ತದೆ.

ಇಲ್ಲಿರುವ ಗಳಗನಾಥ ದೇವಾಲಯ ನಿರ್ಮಿಸಿರುವ ಶೈಲಿ ಕೊನಾರ್ಕ್ ಸೂರ್ಯ ದೇವಸ್ಥಾನದ ಮಾದರಿಯಲ್ಲಿದೆ. ಚಾಲುಕ್ಯರು ಹಾಕಿಕೊಟ್ಟ ಮೇಲ್ಪಂಕ್ತಿಯಲ್ಲೇ ನಂತರದ ಎಲ್ಲಾ ವಾಸ್ತುಶಿಲ್ಪಗಳು ಬೆಳವಣಿಗೆ ಹೊಂದಿರುವುದು ಕಾಣಬಹುದು. ಹಾಗಾಗಿಯೇ ಇದನ್ನು ವಾಸ್ತುಶಿಲ್ಪದ ತೊಟ್ಟಿಲು ಎಂದು ಕರೆಯೋದು.ಇಲ್ಲಿ ಪುಟ್ಟದೊಂದು ದರ್ಪಣ ಸುಂದರಿಯ ಕೆತ್ತನೆಯಿದೆ. ಅದೇ ವಿಗ್ರಹ ಹೊಯ್ಸಳರ ಕಾಲದಲ್ಲಿ ಜಗತ್ಪ್ರಸಿದ್ದ ಶಿಲಾಬಾಲಿಕೆಯಾಗಿದೆ.

ಅಲ್ಲಿ ಮನೆ ಕಟ್ಟಿಕೊಂಡು ವಾಸವಾಗಿದ್ದವರಿಗೆ ಬೇರೆ ಜಾಗ ಕಲ್ಪಿಸಿಕೊಟ್ಟು ಅದನ್ನು ರಕ್ಷಿಸಿರುವದರಿಂದ ತೊಟ್ಟಿಲು ಇನ್ನೂ ತೂಗುತ್ತಿದೆ. ಬಂದವರಿಗೆ ಕಣ್ಮನ ಸೆಳೆಯುವಂತೆ ಮೋಹಕವಾಗಿ ಆದರೆ ಅಷ್ಟೇ ಗಾಂಭೀರ್ಯದಿಂದ ತಲೆಯೆತ್ತಿ ನಿಂತಿದೆ.ಇತಿಹಾಸ ಸೃಷ್ಟಿಸುವುದಲ್ಲ ಮರುಕಳಿಸುವುದು ಅಷ್ಟೇ ಅನ್ನುವ ಸತ್ಯವನ್ನು ಸಾರಿ ಹೇಳುತ್ತಿದೆ. ಮತ್ತೊಮ್ಮೆ ಇಂಥಹ ಶಿಲ್ಪಿಗಳು, ಪ್ರೋತ್ಸಾಹ ಕೊಡುವ ಆಢಳಿತಗಾರರು ಮಾತ್ರ ಬರಲಿಲ್ಲ ನೋಡು ಅಂದೇ.. ಸುಲಭವಾಗಿ ಯಾವುದೂ ದಕ್ಕುವುದಿಲ್ಲ, ಶ್ರದ್ದೆ, ಏಕಾಗ್ರತೆ, ಸಮರ್ಪಣೆ ಬೇಕು ಅದು ಬಂದಾಗ ಹೇಳುಅಂತು.

ತಲೆಯೆತ್ತಿ ನಿಂತ ಅದನ್ನು ನೋಡುತ್ತಾ, ಮಾತು ಕೇಳುತ್ತಾ ಇದ್ದವಳ ತಲೆಬಾಗಿದ್ದು ಯಾವಾಗ ಗೊತ್ತೇ ಆಗಲಿಲ್ಲ...

Comments

Popular posts from this blog

ಮಾತಂಗ ಪರ್ವತ

ರಂಜದ ಹೂ

ಬರಿದೆ ಆಡುವ ಮಾತಿಗರ್ಥವಿಲ್ಲ...