ಎರಡು ಮತ್ತೆ ಮೂರನೇ ಗುಹೆ ವೈಷ್ಣವ ಗುಹೆ ಎಂದು ಪ್ರಚಲಿತ. ಇವೆರೆಡರಲ್ಲೂ ವಿಷ್ಣುವಿಗೆ ಸಂಬಂಧಪಟ್ಟ ಕೆತ್ತನೆಗಳು ಮಾತ್ರ ಕಾಣ ಸಿಗುತ್ತದೆ. ಇವೆರೆಡನ್ನ ಕೆತ್ತಲು 12 ವರ್ಷಗಳ ಕಾಲ ಹಿಡಿಯಿತಂತೆ. ಮೊದಲ ಹಾಗೂ ಕೊನೆಯ ಗುಹೆಗಳಿಗೆ ಹೋಲಿಸಿದರೆ ಇವೆರಡರಲ್ಲಿ ಕೆತ್ತನೆ ಜಾಸ್ತಿ ಜಾಗವೂ ವಿಶಾಲವಾಗಿದೆ.ಎರಡು ಮತ್ತು ಮೂರನೆಯ ಗುಹೆಯ ಮಧ್ಯದಲ್ಲಿ ಒಂದು ನೈಸರ್ಗಿಕ ಗುಹೆಯಿದೆ. ಒಳಗಡೆ ಬುದ್ಧನ ಶಿಲ್ಪವಿದೆ.

ಇಲ್ಲಿ ಮಹಾವಿಷ್ಣು ಆದಿಶೇಷನ ಮೇಲೆ ಕುಳಿತಿರುವ ಚಿತ್ರವಿದೆ. ಆದಿಶೇಷನ ಮೇಲೆ ಮಲಗಿರುವ ಭಂಗಿಯಲ್ಲಿ ಬಹಳ ಚಿತ್ರಗಳು ಇರುವುದರಿಂದ ಕುಳಿತಿರುವ ಚಿತ್ರ ಅಪರೂಪದ್ದೇ. ಕಂಬಗಳ ಸಾಲಿನಲ್ಲಿ ಅದನ್ನು ನೋಡಿದಾಗ ಒಡ್ಡೋಲಗದ ರೀತಿ ಭಾಸವಾಗುತ್ತದೆ. ಚಾಲುಕ್ಯ ರಾಜರು ಸಿಂಹಾಸನದಲ್ಲಿ ಹೀಗೆ ಕುಳಿತು ರಾಜ್ಯಭಾರ ಮಾಡುತ್ತಿದ್ದರಂತೆ.

ನಂತರದ ಚಿತ್ರ ವಿಜಯ ನರಸಿಂಹ. ಹಿರಣ್ಯಕಶಿಪು ಸಂಹಾರದ ಬಳಿಕದ ಚಿತ್ರ. ಪಕ್ಕದಲ್ಲಿ ಪುಟ್ಟ ಪ್ರಹ್ಲಾದ ಹಾಗೂ ಗರುಡ ನಿಂತಿರುವುದು ಕಾಣುತ್ತದೆ. ವಿಷ್ಣುವಿನ ಐದನೇ ಅವತಾರವಾದ ವಾಮನ ಅವತಾರದ ಚಿತ್ರಣವನ್ನೂ ಇಲ್ಲಿ ಕಾಣಬಹುದು. ಪುಟ್ಟ ವಾಮನ ದೈತ್ಯಾಕಾರವಾಗಿ ಬೆಳೆದು ಒಂದು ಕಾಲನ್ನು ಭೂಮಿಯಲ್ಲೂ ಇನ್ನೊಂದು ಕಾಲನ್ನು ಆಕಾಶದಲ್ಲೂ ಇಟ್ಟ ಭಂಗಿಯಲ್ಲಿ ಕೆತ್ತಿರುವ ಈ ವಿಗ್ರಹದ ಕೆಳಭಾಗದಲ್ಲಿ ಬಳಿ ಚಕ್ರವರ್ತಿಯ ಮಗ ವಾಮನನ ಕಾಲು ಹಿಡಿದಿರುವುದು ಕಾಣುತ್ತದೆ.

ನಂತರದ ನರವರಾಹ. ಇದು ಚಾಲುಕ್ಯರ ಚಿನ್ಹೆಯೂ ಆಗಿತ್ತು. ನಂತರದ ಕಾಲದಲ್ಲಿ ವಿಜಯನಗರ ಸಾಮ್ರಾಜ್ಯದ ಗುರುತೂ ಇದೆ ಆಗಿತ್ತು. ಭೂಮಿಯನ್ನು ಕಾಪಾಡುವ ವರಾಹನ ಭಂಗಿಯನ್ನು ಇಲ್ಲಿ ಕೆತ್ತಿದ್ದಾರೆ. ಚಾಲುಕ್ಯರು ಹಣಕ್ಕೆ ವರಾಹ ಅಂತಲೇ ಕರೆಯುತ್ತಿದ್ದರಂತೆ. ಒಟ್ಟಿನಲ್ಲಿ ವರಾಹ ಚಾಲುಕ್ಯರ ಗುರುತು ಗೌರವ ಎಲ್ಲವೂ ಆಗಿತ್ತು. ಇಲ್ಲಿಂದ ಅಗಸ್ತ್ಯ ತೀರ್ಥದ ಮೋಹಕ ನೋಟ, ವೈದ್ಯನಾಥೇಶ್ವರ ದೇಗುಲದ ಗಂಭೀರ ಸೌಂದರ್ಯ ಮನೋಹರವಾಗಿ ಕಂಗೊಳಿಸುತ್ತದೆ.

ನಾಲ್ಕನೆಯ ಗುಹೆ ಜೈನ ಗುಹೆ. ಇಲ್ಲಿ ತೀರ್ಥಂಕರರ ಚಿತ್ರಗಳಿವೆ. ಗರ್ಭಗುಡಿಯಲ್ಲಿ ಬಾಹುಬಲಿಯ ಕೆತ್ತನೆಯಿದೆ. ನಂತರ ಗಂಗರ ಕಾಲದಲ್ಲಿ ಚಾವುಂಡರಾಯ ನಿರ್ಮಿಸಿದ ಗೊಮ್ಮಟೇಶ್ವರ ಮೂರ್ತಿ ಇದರಿಂದಲೇ ಪ್ರೇರಣೆಗೊಂಡಿದ್ದು ಎಂದು ಹೇಳಲಾಗುತ್ತದೆ. ಹಾಗಾಗಿ ಮುಂದಿನ ಎಲ್ಲಾ ಕಲಾವೈಭವದ ಅಡಿಪಾಯವೆ ಚಾಲುಕ್ಯರ ಕಾಲದ ಈ ವಾಸ್ತುಶಿಲ್ಪಗಳು.

ಇಲ್ಲಿಂದ ನಿಂತು ಗಮನಿಸಿದರೆ ಎದುರಿಗೆ ಕಾಣುವ ಗುಡ್ಡದ ವರೆಗೂ ಈ ದೇವಾಲಯಗಳ ಸಾಲು ಹಬ್ಬಿರುವುದು ಕಾಣಿಸುತ್ತದೆ. ಆದರೆ ಮಧ್ಯದ ಜಾಗ ಮನೆಗಳಾಗಿ, ಗಟಾರಗಳಾಗಿ ಮಾರ್ಪಾಟಾಗಿದೆ. ಆ ದಾರಿಯಲ್ಲಿ ಚಲಿಸುವಾಗ ನೋಡಿದರೆ ಪ್ರತಿ ಮನೆಯಲ್ಲೂ ಕುರುಹು ಕಾಣುತ್ತದೆ. ಟಿಪ್ಪು ಸುಲ್ತಾನ್ ಕಾಲದಲ್ಲಿ ಮರಾಠರ ಧಾಳಿಯಿಂದ ತಪ್ಪಿಸಿಕೊಳ್ಳಲು ಬಂಡೆಯ ಮೇಲೊಂದು ಕೋಟೆಯನ್ನು ಕಟ್ಟಿ ಅಲ್ಲೊಂದು ಬುರುಜು ನಿರ್ಮಾಣ ಮಾಡಿದ್ದು ಕಾಣಿಸುತ್ತದೆ. ಗಾಂಭೀರ್ಯದಿಂದ ನಿಂತ ಬೆಟ್ಟಕ್ಕೊಂದು ಮುಂಡಾಸು ಕಟ್ಟಿದಂತಿದೆ ಅದು. ಅಗಸ್ತ್ಯ ತೀರ್ಥದ ಪಕ್ಕದಲ್ಲಿ ಗುಹಾಂತರ ದೇವಾಲಯದ ಕೆಳಗೆ ಒಂದು ಮಸೀದಿ ಸಹ ಇದೆ. ಬಿಜಾಪುರದ ಸುಲ್ತಾನ್ ಕಟ್ಟಿಸಿದ್ದು ಅಂದ್ರು ಗೈಡ್. ಆದರೆ ಅದು ಅಂಜುಮಾನ್ ಅನ್ನೋ ಸಂಸ್ಥೆಯ ನಿರ್ವಹಣೆಗೆ ಒಳಪಟ್ಟಿದೆ. ಹಾಗಾಗಿ ಅಲ್ಲೇ ಪಕ್ಕದಲ್ಲಿ ಇನ್ನೊಂದು ಮಸೀದಿ ಕಟ್ಟಿಕೊಂಡು ನಮಾಜ್ ಮಾಡ್ತಾರೆ ಅಂದ್ರು. ಹಾಗೆ ದಿಟ್ಟಿಸಿದೆ ಮನೆಗಳಾಗಿ ಬದಲಾವಣೆ ಹೊಂದಿದ್ದ ದೇವಾಲಯಗಳು ನಿಟ್ಟುಸಿರು ಬಿಟ್ಟಂತೆ ಅನ್ನಿಸಿತು.

ಉದಾರತೆ, ಸಹಿಷ್ಣುತೆಯ ಮುಖವಾಡವನ್ನು ನಮ್ಮ ಅಭಿಮಾನಶೂನ್ಯತೆಗೆ ಹಾಗೂ ನಿಷ್ಕ್ರಿಯತೆಗೆ ಹೊದೆಸಿದ್ದೇವೆ ಅನ್ನೋ ಫೀಲ್ ಕಾಡ್ತು. ಮತ್ತೆ ಇನ್ನೊಂದು ಅಂಥಹ ಸ್ಮಾರಕ ನಿರ್ಮಾಣ ಮಾಡುವುದಂತೂ ದೂರ ಉಳಿಯಿತು ಕೊನೆಪಕ್ಷ ಉಳಿಸಿ ಕೊಳ್ಳುವ ಯೋಗ್ಯತೆಯೂ ಇಲ್ಲದ ನಮ್ಮಂತಹವರಿಗಾಗಿ ಇದೆಲ್ಲಾ ಬೇಕಿತ್ತಾ ಅನ್ನೋ ಪ್ರಶ್ನೆ ಮಾತ್ರ ಈ ಕ್ಷಣಕ್ಕೂ ಹಾಗೇ ಉಳಿದಿದೆ.

Comments

Popular posts from this blog

ಮಾತಂಗ ಪರ್ವತ

ರಂಜದ ಹೂ

ಬರಿದೆ ಆಡುವ ಮಾತಿಗರ್ಥವಿಲ್ಲ...