ಹೊಸದಿಗಂತ 25.12.19

ಅದು ಅಜ್ಞಾತವಾಸದ ಸಮಯ. ಹೇಗಾದರೂ ಪಾಂಡವರನ್ನು ಗುರುತು ಹಿಡಿದರೆ ನಿಯಮದ ಮತ್ತೆ ಅವರು ವನವಾಸಕ್ಕೆ ಹೋಗಬೇಕು, ಮತ್ತಷ್ಟು ವರ್ಷಗಳು ನಿರಾತಂಕ ಎನ್ನುವ ಯೋಚನೆಯಲ್ಲಿ ಅವರನ್ನು ಹುಡುಕುವ ಪ್ರಯತ್ನದಲ್ಲಿ ಇರುವಾಗಲೇ ಕಿಚಕನ ಹತ್ಯೆಯ ಸುದ್ದಿ ತಲುಪಿ ಅದು ಭೀಮನಿಂದಲ್ಲದೆ ಮತ್ಯಾರಿಂದಲೂ ಸಾಧ್ಯವಿಲ್ಲ ಎನ್ನುವುದರ ಅರಿವಾಗಿ ಕರ್ಣ ವಿರಾಟನ ಮೇಲೆ ಧಾಳಿ ಮಾಡಲು ಧುರ್ಯೋಧನನಿಗೆ ಸಲಹೆ ಕೊಡುತ್ತಾನೆ. ಅದರ ಪ್ರಕಾರ ಅಲ್ಲಿಯ ಗೋವುಗಳನ್ನು ಹಿಡಿದು ಕೆಣಕಿದ ಕೌರವರನ್ನು ಹಿಮ್ಮೆಟ್ಟಿಸಲು ಶಿಖಂಡಿ ವೇಷದ ಅರ್ಜುನ ಬಂದಾಗ ಮೊದಲು ಓಡಿ ಬಂದು ತಪ್ಪಿಸಿಕೊಳ್ಳುವುದು ಕರ್ಣ. ಬಲಿಯಾಗಿದ್ದು ಕೌರವರ ಸೈನ್ಯ. ಮಣ್ಣು ಮುಕ್ಕಿದ್ದು ಧುರ್ಯೋಧನ ಗಳಿಸಿದ್ದ ಗೌರವ. ಮುಕ್ಕಾಗಿದ್ದು ವ್ಯಕ್ತಿತ್ವ.

ಈಗ ನಡೆಯುತ್ತಿರುವ ಪೌರತ್ವ ತಿದ್ದುಪಡಿ ಕಾಯ್ದೆಯ ವಿರುದ್ಧ ಪ್ರತಿಭಟನೆ ಮಾಡುತ್ತಿರುವ ಜನರನ್ನು ನೋಡಿದಾಗ ಈ ಕತೆ ನೆನಪಾಯಿತು. ಹಾಗಂದರೇನು? ಅದರ ಸಾಧಕ ಬಾಧಕಗಳು ಏನು?  ಅದು ಯಾರ ಮೇಲೆ ಪರಿಣಾಮ ಬೀರುತ್ತದೆ? ಯಾರಿಗೆ ಸುರಕ್ಷತಾ ಭಾವ ಕೊಡುತ್ತದೆ ಎನ್ನುವ ಕಿಂಚಿತ್ತು ಅರಿವೂ ಇಲ್ಲದೆ ಯಾರನ್ನೋ ಹಣಿಯುವ, ಅಧಿಕಾರ ಪಡೆಯುವ ಆಸೆಯಿಂದ ಅನೇಕ ಕರ್ಣರು ಪ್ರಚೋದಿಸುತ್ತಿದ್ದಾರೆ. ಕೆಲವು ದುರ್ಯೋಧನರು ಅದನ್ನು ಕಣ್ಮುಚ್ಚಿ ನಂಬಿ ತಮ್ಮ ಬೆಂಬಲಿಗರನ್ನು ಹುರಿದುಂಬಿಸಿ ಕಳುಹಿಸುತ್ತಿದ್ದಾರೆ. ಇದೇನಾದರೂ ಜಾರಿಗೆ ಬಂದರೆ ಇಡೀ ರಾಜ್ಯವೆ, ದೇಶವೇ ಹೊತ್ತಿ ಉರಿಯುತ್ತದೆ ಎನ್ನುವ ಮು;ಮುನ್ಸೂಚನೆ ಕೊಡುತ್ತಲೇ ಇಲ್ಲಿಂದ ಒಂದು ನಿರ್ಧಿಷ್ಟ ಧರ್ಮದವರನ್ನು ಗಡಿಪಾರು ಮಾಡಲಾಗುತ್ತದೆ ಎಂದು ಭಯ ಹುಟ್ಟಿಸುತ್ತಾರೆ.

ಹಾಗಾದರೆ ಇವರಿಗೆ ಅದರ ಬಗ್ಗೆ ಗೊತ್ತಿಲ್ಲವಾ ಎಂದರೆ ಉಹೂ ಗೊತ್ತಿದೆ. ಆದರೆ ಗೊಂದಲ ನಿವಾರಿಸುವ ಇಚ್ಚೆಯಿಲ್ಲವಷ್ಟೇ. ಇನ್ನು ಕೆಲವು ಬುದ್ಧಿವಂತರಿಗೆ ತಿಳಿದುಕೊಳ್ಳುವ ಆಸಕ್ತಿಗಿಂತ ಅದನ್ನು ವಿರೋಧಿಸುವತ್ತ ಮಾತ್ರ ಗಮನ. ಮತ್ತೆ ಕೆಲವರದ್ದು ಅದನ್ನು ಮಾಡಿದ್ದು ಯಾರು ಅನ್ನುವುದರ ಮೇಲೆ ಬೆಂಬಲಿಸುವುದೋ ವಿರೋಧಿಸುವುದೋ ಅನ್ನುವುದರ ತೀರ್ಮಾನ. ಇವೆರಲ್ಲರಿಗಿಂತ ಅಪಾಯಕಾರಿಯಾದ ಇನ್ನೊಂದು ಗುಂಪಿದೆ ಅದು ಶಕುನಿಯ ಬಣ. ಅವರಿಗೆ ಸಂಪೂರ್ಣ ಅರಿವಿದೆ ಆದರೆ ಶಾಂತಿಯುತವಾಗಿ ಪಾಲನೆಯಾಗುವುದು ಮಾತ್ರ ಬೇಕಿರುವುದಿಲ್ಲ. ಹಾಗಾಗಿ ಸಾಮಾನ್ಯ ಜನರಲ್ಲಿ ಗೊಂದಲ ಹುಟ್ಟಿಸಿ, ಇನ್ನಷ್ಟು ಭಯ ಹುಟ್ಟುವ ಹಾಗೆ ಮಾಡಿ, ಕೆರಳಿಸಿ ಮುಂದೆ ಬಿಡುತ್ತಿದ್ದಾರೆ.

ಹಾಗಾದರೆ ವಿರೋಧಿಸುವುದು ತಪ್ಪಾ.. ಖಂಡಿತ ಇಲ್ಲ. ಆದರೆ ಅದಕ್ಕೊಂದು ರೀತಿ ಇದೆ. ಜಗತ್ತು ಎಷ್ಟೇ ಮುಂದುವರಿದರು, ಆಧುನಿಕಗೊಂಡರೂ ನಾವು ಪ್ರತಿಭಟಿಸುವ ರೀತಿ ಮಾತ್ರ ಬದಲಾಗಿಲ್ಲ. ಅದೇ ಹಳೆಯ ರೀತಿಯ ಮೆರವಣಿಗೆ, ರಸ್ತೆ ತಡೆ, ಬಂದ್, ಉಗ್ರ ಪ್ರತಿಭಟನೆ ಎಂದರೆ ಕಲ್ಲು ತೂರುವುದು ಹಾಗೂ ಬೆಂಕಿ ಹಚ್ಚುವುದು. ಯಾರನ್ನಾದರೂ ಇರಿದು, ಬಡಿದು ಕೊಲ್ಲುವುದು. ರೋಷ ಯಾರ ಮೇಲೋ ಬಲಿಯಾಗುವುದು ಇನ್ಯಾರೋ.. ಪ್ರತಿಭಟನೆ ಮಾಡುವುದು ಸಂವಿಧಾನ ಕೊಟ್ಟ ಹಕ್ಕು ಎಂದು ಸಮರ್ಥಿಸಿಕೊಳ್ಳುವವರು, ಹತ್ತಿಕ್ಕುತ್ತಿದ್ದಾರೆ ಎಂದು ಗಂಟಲು ಹರಿದುಕೊಳ್ಳುವವರು ಸಾರ್ವಜನಿಕ ಆಸ್ತಿ ಪಾಸ್ತಿ ಹಾನಿ ಮಾಡುವುದರ ಬಗ್ಗೆ ಅದೇ ಸಂವಿಧಾನ ಏನು ಹೇಳಿದೆ ಹೇಳುವುದಿಲ್ಲ. ಮಾನವೀಯತೆ ಬಗ್ಗೆ ಮಾತಾಡುವವರು ಶಾಂತಿ ಸುವ್ಯವಸ್ಥೆ ಪಾಲನೆ ಮಾಡಲು ಬಂದಿರುವ ಪೊಲೀಸರ ಮೇಲೆ ಮಾಡುವ ಹಲ್ಲೆಯ ಬಗ್ಗೆ ಉಸಿರೆತ್ತುವುದಿಲ್ಲ. ಯಾರೋ ನಿಲ್ಲಿಸಿದ, ಸಾರ್ವಜನಿಕರು ಬಳಸುವ ವಾಹನಗಳಿಗೆ ಬೆಂಕಿ ಹಚ್ಚುವುದನ್ನ ವಿರೋಧಿಸುವುದಿಲ್ಲ. ನಾವು ನಾಶ ಮಾಡುತ್ತಿರುವುದು ನಾವೇ ಕಟ್ಟಿದ ತೆರಿಗೆಯ ಹಣ ಎಂದು ಹೇಳುವುದಿಲ್ಲ. ಇವರ ಪ್ರಕಾರ ಸಾರ್ವಜನಿಕರಿಂದ ಸಾರ್ವಜನಿಕರ ಮೇಲೆ ಹಲ್ಲೆ ಮಾಡುವುದು ಪ್ರತಿಭಟನೆ.

ಪ್ರತಿಯೊಂದು ಕಾಯ್ದೆಯೂ ನಾವು ಚುನಾಯಿಸಿ ಕಳುಹಿಸಿದ ಪ್ರತಿನಿಧಿಗಳ ನಿರ್ಧಾರದ ಮೇಲೆಯೇ ಜಾರಿಗೆ ಬರುವುದು. ಒಮ್ಮೆ ಒಂದು ಕಾಯ್ದೆ ಅನುಮೋದನೆಗೊಂಡು ಜಾರಿಗೆ ಬಂದ ಮೇಲೆ ಅದನ್ನು ಕಾರ್ಯರೂಪಕ್ಕೆ ತರುವ ಜವಾಬ್ಧಾರಿ ಪಕ್ಷಾತೀತವಾಗಿ ಸರ್ವರದ್ದು. ಚುನಾಯಿಸಿ ಕಳುಹಿಸಿದ ಪ್ರತಿ ಪ್ರತಿನಿಧಿಗೂ ಅದನ್ನು ತನ್ನ ವ್ಯಾಪ್ತಿಗೆ ಬರುವ ಜನಗಳಿಗೆ ತಿಳಿ ಹೇಳುವ ಹೊಣೆಗಾರಿಕೆಯಿದೆಯೇ ಹೊರತು ದಾರಿ ತಪ್ಪಿಸುವ ಬೇಜವಾಬ್ದಾರಿಯಲ್ಲ. ವಿಪರ್ಯಾಸ ಎಂದರೆ ಅದನ್ನು ಪ್ರತಿರೋಧಿಸುವ ಬಹುತೇಕ ನಾಯಕರಿಗೆ ಅದರ ಬಗ್ಗೆ ಕಿಂಚಿತ್ತೂ ಅರಿವಿಲ್ಲದಿರುವುದು. ಅರಿಯುವ ತಾಳ್ಮೆ, ಮನಸ್ಸೂ ಎರಡೂ ಬೇಕಾಗಿಲ್ಲದಿರುವುದು. ಜನರಿಗೆ ಅರಿವು ಮೂಡಿಸಬೇಕಿತ್ತು, ಸಮಯ ಕೊಡಬೇಕಿತ್ತು ಎನ್ನುವ ಬಹುತೇಕರು ತಮ್ಮ ಸಂಸದರನ್ನು ಇದರ ಕುರಿತಾಗಿ ಪ್ರಶ್ನಿಸಿದ್ದಾರೆಯೇ? ಯಾವ್ಯಾವುದೋ ಚರ್ಚೆ, ಸಂವಾದ ಏರ್ಪಡಿಸುವ ಮಾಧ್ಯಮಗಳು ಇದರ ಬಗ್ಗೆ ಕಾಳಜಿ ವಹಿಸಿದ್ದಾವೆಯೇ? ಹೋಗಲಿ ಅದನ್ನು ಪ್ರತಿಭಟಿಸಲು ಹೊರಟವರು ಅದರ ಬಗ್ಗೆ ಸ್ಪಷ್ಟವಾಗಿ ತಿಳಿದುಕೊಂಡಿದ್ದಾರೆಯೇ. ದಾರಿತಪ್ಪುವವರು ಇರುವವರೆಗೂ ದಾರಿ ತಪ್ಪಿಸುವವರು ಇದ್ದೆ ಇರುತ್ತಾರೆ, ಅನ್ನೋದು ಲೋಕರೂಡಿಯ ಮಾತು ನಿಜ. ಆದರೆ ದಾರಿ ತಪ್ಪಿಸುವವರ ಸಂಖ್ಯೆ ಬಹು ಚಿಕ್ಕದು, ಅದನ್ನು ನಂಬಿ ತಪ್ಪುವವರ ಸಂಖ್ಯೆ ದೊಡ್ಡದು, ಅದಕ್ಕಿಂತಲೂ ದೊಡ್ಡದು ತನಗೆ ಸಂಬಂಧವೇ ಇಲ್ಲವೆಂದು ಕುಳಿತಿರುವ ಸಮೂಹ. ಹಾಗಾಗಿಯೇ ಚಿಕ್ಕ ಸಮೂಹ ಇಡೀ ವ್ಯವಸ್ಥೆಯನ್ನು ನಿಯಂತ್ರಿಸುವ ಶಕ್ತಿ ಹೊಂದಿದೆ.

ಒಂದೇ ರಕ್ತದಿಂದ ಹುಟ್ಟಿದವರೂ ತಮ್ಮ ತಮ್ಮ ಜಮೀನುಗಳಿಗೆ ಬೇಲಿ ಹಾಕಿಕೊಳ್ಳುವಾಗ, ಮನೆಯ ಎದುರಿನ ರಸ್ತೆಯಲ್ಲಿ ಗಾಡಿ ನಿಲ್ಲಿಸಿದರೆ ಜಗಳವಾಡುವಾಗ, ಯಾವುದೋ ನಾಯಿ ಗೇಟ್ ದಾಟಿ ಒಳಗೆ ಬಂದರೂ ಕೋಲು ಹಿಡಿದು ಓಡಿಸುವಾಗ, ಒಂದಿಂಚು ಜಾಗಕ್ಕಾಗಿ ವರ್ಷಗಟ್ಟಲೆ ಕೇಸ್ ನಡೆಸುವಾಗ, ಅಕ್ರಮವಾಗಿ ನುಸುಳಿ ಒಳಗೆ ಬರುವವರಿಗೆ ಜಾಗ ಕೊಡಬೇಕು, ರಕ್ಷಣೆ ಕೊಡಬೇಕು ಎನ್ನುವಾಗ ಅವರ ಇಬ್ಬಂದಿತನದ ಬಗ್ಗೆ ನಗು ಬರುತ್ತದೆ. ದೇಶವಿಭಜನೆಯಾಗುವಾಗ ಧರ್ಮಾಧಾರಿತವಾಗಿಯೇ ಬೇರೆಯಾಗಿದ್ದು ಎನ್ನುವುದು ಮರೆತು ಹೋಗುತ್ತದೆ. ಆ ದೇಶಗಳಲ್ಲಿ ಅಲ್ಪಸಂಖ್ಯಾತರ ಮೇಲೆ ನಡೆಯುವ ದೌರ್ಜನ್ಯ ಪರಿಗಣನೆಗೆ ಸಿಗುವುದಿಲ್ಲ. ಅವರ ಬಗ್ಗೆ ಮಾನವೀಯತೆ ಹುಟ್ಟುವುದಿಲ್ಲ. ನಮ್ಮದೇ ದೇಶದಲ್ಲಿ ಸರ್ವಸ್ವವನ್ನೂ ಕಳೆದುಕೊಂಡು ಕಾಶ್ಮೀರಿಗಳು ಅನುಭವಿಸಿದ ಹಿಂಸೆ, ದೌರ್ಜನ್ಯ ನೆನಪಾಗುವುದಿಲ್ಲ. ಅವರ ಹಕ್ಕುಗಳ ಬಗ್ಗೆ ದನಿ ಹೊರಡುವುದಿಲ್ಲ. ನಮ್ಮತನದ ಬಗ್ಗೆ ಅಭಿಮಾನವಿಲ್ಲದೆ ಹೋದಾಗ, ಗುಲಾಮಿ ಮನಸ್ಥಿತಿಯಿಂದ ಹೊರಬರದೆ ಇದ್ದಾಗ ಆತ್ಮಾಭಿಮಾನ ಅನ್ನುವುದು ನಿಶ್ಚಲವಾಗಿರುತ್ತದೆ. ಅವಮಾನ ಸಮ್ಮಾನ ಎನಿಸುತ್ತದೆ. ಅಧಿಕಾರ, ಹಣ, ಪ್ರತಿಷ್ಠೆ ಇನ್ಯಾವುದೋ ಆಮಿಷದ ಮುಂದೆ ಎಲ್ಲವೂ ಮರೆತುಹೋಗುತ್ತದೆ.

 ಸ್ಪಷ್ಟತೆಯಿಲ್ಲದ ಯಾವ ದಾರಿಯೂ ಗುರಿಯ ಕಡೆ ಕೊಂಡೊಯ್ಯುವುದಿಲ್ಲ. ಯಾವ ನಾಟಕಗಳೂ, ಮುಖವಾಡಗಳೂ, ಗುಪ್ತ ಅಜೆಂಡಾಗಳು ಬಹುಕಾಲ ಮುಚ್ಚಿಡಲು ಸಾಧ್ಯವಿಲ್ಲ. ಒಂದಲ್ಲ ಒಂದು ದಿನ ಅದು ಹೊರಕ್ಕೆ ಬರಲೇ ಬೇಕು. ನಿಜ ಮುಖದ ಅನಾವರಣ ಆಗಲೇ ಬೇಕು. ಈಗ ಆಗುತ್ತಿರುವುದು ಅದೇ. ಬಯಲಾಗುತ್ತಿರುವುದು ಮುಚ್ಚಿಟ್ಟ ಸತ್ಯ.
ಜಾರಿಯಾಗಿದ್ದು ಪೌರತ್ವ
ವ್ಯಕ್ತವಾಗಿದ್ದು ಮನಃಸ್ತತ್ವ...









ಈಗ ಕಾನೂನು ಪಾಲನೆ ಮಾಡುವವರು ಶಿಖಂಡಿ ಅಲ್ಲ ಅರ್ಜುನ ಎನ್ನುವುದು ಮರೆತುಬಿಟ್ಟಿದ್ದಾರೆ. 

Comments

Popular posts from this blog

ಮಾತಂಗ ಪರ್ವತ

ರಂಜದ ಹೂ

ಬರಿದೆ ಆಡುವ ಮಾತಿಗರ್ಥವಿಲ್ಲ...