ಇಡೀ ಭೂ ಮಂಡಲ ಸುತ್ತಿ, ಎಲ್ಲಾ ಪುಣ್ಯಕ್ಷೇತ್ರಗಳಲ್ಲೂ ಸ್ನಾನ ಮಾಡಿ ಕೊಡಲಿ ತೊಳೆದರೂ ಎಳ್ಳಿನ ಮೊನೆಯಷ್ಟು ರಕ್ತದ ಕಲೆ ಹಾಗೆ ಉಳಿದಿತ್ತಂತೆ ಕೊಡಲಿಯಲ್ಲಿ. ಹಾಗೆ ಸುತ್ತುತ್ತಾ ಬಂದವನು ರಾಮಕೊಂಡದ ಹತ್ತಿರ ಬಂದಾಗ ಅಮಾವಾಸ್ಯೆಯಾಗಿತ್ತು. ಸ್ನಾನ ಮಾಡಿ ತರ್ಪಣ ಕೊಡಲು ಮುಳುಗಿದವನು ಎದ್ದಾಗ ಹೆಗಲ ಕೊಡಲಿಯಲ್ಲಿದ್ದ ಆ ರಕ್ತದ ಕಲೆ ಮಾಯವಾಗಿತ್ತಂತೆ. ಪರಶುರಾಮನಿಗೆ ಸಂತೋಷ ಆಗಿತ್ತಂತೆ. ಮಾತೃಹತ್ಯಾದೋಷ ಅಂದರೆ ಸುಮ್ಮನೇನಾ...    ಹಾಗಾಗಿ ನೋಡು ಎಳ್ಳಮವಾಸ್ಯೆ ದಿನ ರಾಮಕೊಂಡದಲ್ಲಿ ಸ್ನಾನ ಮಾಡಿದರೆ ದೋಷವೆಲ್ಲಾ ಪರಿಹಾರ ಆಗುತ್ತಂತೆ ಅಂತ ಅಜ್ಜಿ ಕತೆ ಹೇಳುತ್ತಿದ್ದರೆ ಈ ಎಳ್ಳು ಮೊನೆಯೆಂದರೆ ಹೇಗಿರುತ್ತೆ ಅಂತ ಪ್ರಶ್ನೆಮೂಡಿತ್ತು. ಉತ್ತರಕ್ಕೆ ಕಷ್ಟವೇನೂ ಪಡಬೇಕಾಗಿರಲಿಲ್ಲ. ಅಟ್ಟದ ಮೇಲಿನ ಡಬ್ಬದಲ್ಲಿ ಎಳ್ಳು ತುಂಬಿತ್ತು. ಅದು ಬೀರೋಕೆ ಅಂತ ಇಟ್ಟಿರೋದು ಚೆಲ್ಲಿ ಹಾಳುಮಾಡಬೇಡಾ ಎಂದು ಎದ್ದವಳನ್ನು ನೋಡಿ ಯಾಕೆ ಎಂದು ಉಹಿಸಿಯೇ ಅಜ್ಜಿ ಗದರಿದ್ದಳು.

ತುಂಬಾ ನೀರು ಬೇಡದ, ಜಾಸ್ತಿ ಆರೈಕೆ ಬಯಸದ ಎಳ್ಳು ಬಹುಬೇಗ ಬೆಳೆಯಬಹುದಾದ ಬೆಳೆ. ತೀರಾ ಗಟ್ಟಿಯೂ ಅಲ್ಲದ ಮೃದುವೂ ಅಲ್ಲದ ಕಾಂಡ.  ದಟ್ಟ ಹಸಿರು ಬಣ್ಣದ ಎಲೆ, ಬಿಳಿ ಹೂ... ಪುಟ್ಟ ಕಾಯಿಯಾದರೂ ಒಳಗೆ ತುಂಬಿಕೊಂಡಿರುವ ಬೀಜಗಳು. ಕಂದು, ಕಪ್ಪು, ಬಿಳಿ ಹೀಗೆ ವರ್ಣವೈವಿಧ್ಯತೆ ಹೊಂದಿದ್ದರೂ ಕರಿ ಎಳ್ಳಿನಲ್ಲಿ ಕಬ್ಬಿಣಾಂಶ ಸಮೃದ್ಧವಾಗಿರುತ್ತದೆ. ರಕ್ತವನ್ನು ಹೆಚ್ಚಿಸುವ ಇದು ರಕ್ತದೊತ್ತಡ ಕಡಿಮೆ ಮಾಡುವ ಗುಣ ಹೊಂದಿದೆ. ಒಂದು ರೀತಿಯಲ್ಲಿ ಬೇಸಿಗೆಯ ಬೆಳೆ ಎಂದರೂ ತಪ್ಪಿಲ್ಲವೇನೋ.. ಚಳಿಗಾಲ ಮುಗಿಯುವ ಮುನ್ನ ಹಾಕಿದರೆ ಬೇಸಿಗೆ ಕಾದು ಬಿಸಿಯಾಗಿಸುವದೊರಳಗೆ ಇದು ಕೈಗೆ ಬಂದಿರುತ್ತಿತ್ತು. ಬೇಸಿಗೆಯ ದಗೆ ಕಾಡದಂತೆ ದೇಹವನ್ನು ತಂಪಾಗಿಸುವುದರಲ್ಲಿ ತೊಡಗಿಸಿಕೊಳ್ಳುತಿತ್ತು.

ಸಂಪಗೋಡು ಎಂಬ ಆ ಪುಟ್ಟ ಹಳ್ಳಿಯಲ್ಲಿ ಜನ ಯಾವತ್ತೂ ಸೋಮಾರಿಗಳು ಆಗಿರಲೇ ಇಲ್ಲ. ಭತ್ತದ ಕೊಯ್ಲು ಮುಗಿದು ಸಂಕ್ರಾಂತಿ ಹಬ್ಬ ಕಳೆಯುತ್ತಿದ್ದ ಹಾಗೆ ಗದ್ದೆಯನ್ನು ಒಮ್ಮೆ ಹೂಟಿ ಮಾಡಿ ಧಾನ್ಯಗಳನ್ನು ಹಾಕುತ್ತಿದ್ದರು. ಹುರುಳಿ, ಅವಡೆ, ಉದ್ದು, ಎಳ್ಳು ಹೀಗೆ ಮನೆಬಳಕೆಗೆ ಬೇಕಾದ ಬಹಳಷ್ಟು ವಸ್ತುಗಳನ್ನು ಬೆಳೆಯುತ್ತಿದ್ದರು. ಸರಿಯಾಗಿ ಪರೀಕ್ಷೆ ಮುಗಿದು, ಫಲಿತಾಂಶ ಬಂದು ರಜೆ ಶುರುವಾಗುವ ಹೊತ್ತಿಗೆ ಇವುಗಳೂ ಕಟಾವಿಗೆ ಸಿದ್ಧವಾಗಿರುತ್ತಿದ್ದವು. ಬೆಳಬೆಳಗ್ಗೆ ಎದ್ದು ಅವುಗಳನ್ನು ಕೀಳಲು ಹೋಗುವುದು ಸಿಟ್ಟು ತರಿಸುತ್ತಿತ್ತು. ಅದರಲ್ಲೂ ಈ ಎಳ್ಳಿನ ಗಿಡವನ್ನು ಬಹಳ ಜಾಗರೂಕತೆಯಿಂದ ಕೀಳಬೇಕಿತ್ತು. ಕಾಯಿ ಒಡೆದು ಹೋಗದಂತೆ ನಿಧಾನವಾಗಿ ಕೀಳುವುದು ಆಗ ರೇಜಿಗೆ ಹುಟ್ಟಿಸುತ್ತಿತ್ತು. ಅವಸರವಾಗಿ ಮಾಡಿದ್ದು ಯಾವುದು ತಾನೇ ಸರಿಯಾಗಿರುತ್ತೆ ಹೇಳು ಅನ್ನುವ ಮಾತು ಕಿವಿಗೆ ಹೋಗದ ವಯಸ್ಸು ಅದು.

ಹೀಗೆ ಕಿತ್ತು ತಂದ ಎಳ್ಳು ಒಂದಷ್ಟು ಎಣ್ಣೆ ಮಾಡಿಸಲು ಕಳುಹಿಸಿ.  ಮುಂದಿನವರ್ಷದ ಬಿತ್ತನೆಗೆ ಸ್ವಲ್ಪ ಎತ್ತಿಟ್ಟು, ಉಳಿದದ್ದು ಒಂದು ಡಬ್ಬಕ್ಕೆ ಹಾಕಿ ಇಟ್ಟರೆ ಅದು ಅಡುಗೆಗೆ, ಬಾಯಿ ಚಪಲದ ತಿಂಡಿಗೆ ಹಾಗೂ ಸಂಕ್ರಾತಿ ಹಬ್ಬಕ್ಕೆ. ಸಾಸಿವೆಗಿಂತ ಹೌದೋ ಅಲ್ಲವೋ ಅನ್ನುವಷ್ಟು ತುಸು ದೊಡ್ಡದಾದ ಈ  ಕಂದು ಬಣ್ಣದ ಎಳ್ಳು  ನೋಡಲು ಅಷ್ಟೇನೂ ಆಕರ್ಷಕವಾಗಿರದಿದ್ದರೂ ಉಪಯೋಗ ಮಾತ್ರ ಬಹಳ. ಚಿಕ್ಕ ಒಡಲಿನ ಶಕ್ತಿ ಅಪಾರ. ಪುಷ್ಯ ಮಾಸದ ಚಳಿಗೆ ಒಡೆದು ಸುಕ್ಕುಗಟ್ಟಿದ ಚರ್ಮಕ್ಕೆ, ಥಂಡಿ ಗಾಳಿಗೆ ಬಿರುಸಾದ ಮೈಗೆ, ಬೂದಿ ಸವರಿದ ಹಾಗೆ ಕಾಣುವ ದೇಹಕ್ಕೆ,  ಹಿಮ್ಮಡಿ ಬಿರಿದು ರಕ್ತ ಸೋರುವುದಕ್ಕೆ ಎಳ್ಳೆಣ್ಣೆ ರಾಮಬಾಣ. ಪ್ರತಿವಾರ ಅಭ್ಯಂಜನಕ್ಕೆ ಹೋಗುವ ಮುನ್ನ ಬಟ್ಟಲಿನಲ್ಲಿ ಎಳ್ಳೆಣ್ಣೆ ಹಾಕಿ ಮೈಗೆ ಹಚ್ಚಿಕೊಳ್ಳಲು ಹೇಳುತ್ತಿದ್ದಳು ಅಜ್ಜಿ. ಮನೆಯದೆ ಎಳ್ಳು ಗಾಣಕ್ಕೆ ಕೊಟ್ಟು ತೆಗೆಸಿದ ಎಣ್ಣೆ ಮೈ ಮನಸನ್ನು ಮೃದುವಾಗಿಸುತ್ತಿತ್ತು. ಒಡೆದ ಬಿರುಕುಗಳು ಬಿರುಸು ಕಳೆದುಕೊಂಡು, ಮುನಿಸು ಮರೆತು ಮತ್ತೆ ಒಂದಾಗುತ್ತಿತ್ತು. ಕಳಚಿಬಿಟ್ಟ ಪೊರೆಯಂತೆ ಕಾಣುತ್ತಿದ್ದ ಚರ್ಮವೂ ನಿಧಾನಕ್ಕೆ ಹೊಳಪು ಪಡೆದುಕೊಂಡು ಮಿರಿ ಮಿರಿ ಮಿಂಚುವ ಹಾಗಾಗುತ್ತಿತ್ತು. ಚಿಗುರು ಒಡೆದ ಮರದಂತೆ ಮೈ ಹೊಸತನ ತುಂಬಿಕೊಳ್ಳುತಿತ್ತು. ಬೇಗ ಕಮಟು ಹಿಡಿಯದ, ಕಟುವಾಸನೆಯಿಲ್ಲದೆ, ಘಂ ಎನ್ನುವ ಎಣ್ಣೆ ಮೈಯ ಜೊತೆಗೆ ಮನಸ್ಸನ್ನೂ ನವಿರುಗೊಳಿಸುತಿತ್ತಾ...

ಈ ಕರಿ ಎಳ್ಳಿನಲ್ಲಿ ಕಬ್ಬಿಣಾಂಶ ಜಾಸ್ತಿ ಇರುತ್ತಂತೆ. ಎಳ್ಳುಂಡೆ, ಚಟ್ನಿ, ಎಳ್ಳು ಬೆಲ್ಲ, ಎಳ್ಳೆಣ್ಣೆ ಹೀಗೆ ಯಾವುದೋ ರೂಪದಲ್ಲಿ ಎಳ್ಳು ಹೊಟ್ಟೆ ಸೇರುತ್ತಿದ್ದರಿಂದ ಬಹುಶಃ ಆಗ ರಕ್ತದ ಕೊರತೆ ಅನ್ನುವುದು ಗೊತ್ತೇ ಇರುತ್ತಿರಲಿಲ್ಲ. ವೈದ್ಯರ ಬಳಿ ಹೋಗಬೇಕಾದರೂ ಮೈಲುಗಟ್ಟಲೆ ನಡೆಯಬೇಕಾಗಿದ್ದ ಹಳ್ಳಿಗಳಲ್ಲಿ ಅನಾರೋಗ್ಯ ಅನ್ನೋದು ಅಪರೂಪವಾಗಿತ್ತು. ಇದರೊಳಗೆ ಇರುವ ತೈಲದ ಅಂಶ ತಂಪಿನ ಸ್ಪರ್ಶ ಕೊಡುವುದರ ಜೊತೆಗೆ ಮೃದುವಾಗಿಸುತ್ತಿದ್ದರಿಂದಲೋ ಏನೋ ಎಳ್ಳು ಬೆಲ್ಲ ತಿಂದು ಒಳ್ಳೆ ಮಾತಾಡು ಅನ್ನುವ ಮಾತು ಪ್ರಚಲಿತಕ್ಕೆ ಬಂದಿದ್ದು.. ಮಾತು ಚಿಕ್ಕದಾದಷ್ಟೂ, ಸ್ನಿಗ್ಧವಾದಷ್ಟೂ ಅದು ಮನಸ್ಸುಗಳನ್ನು ಬೆಸೆಯುತ್ತದೆ. ಬಿರುಕುಬಿಟ್ಟ ಚರ್ಮವನ್ನು ಎಳ್ಳು ಕೂಡಿಸುವ ಹಾಗೆ ದಗ್ಧಗೊಂಡ ಮನಸ್ಸನ್ನು ಒಳ್ಳೆಯ ಮಾತು ತಂಪಾಗಿಸುತ್ತದೆ. ಹೊಸ ಚೈತನ್ಯ ಮೂಡಿಸುತ್ತದೆ. ಎಣ್ಣೆಯ ಸಾಂಗತ್ಯದಿಂದ ಚರ್ಮ ನಳನಳಿಸುವ ಹಾಗೆ ಮಾತಿನ ಸಾಂಗತ್ಯದಿಂದ ಬದುಕಿನ ಜೀವಂತಿಕೆ ಹೆಚ್ಚುತ್ತದೆ. ಹಾಗಾಗಿಯೇ ಸಂಕ್ರಾಂತಿಗೂ, ಎಳ್ಳು, ಬೆಲ್ಲಕ್ಕೂ, ಮಾತಿಗೂ ಒಂದು ಅನುಬಂಧ ಏರ್ಪಟ್ಟಿರುವುದೇನೋ... ತುಸು ಒಗರಿನ ಎಳ್ಳಿಗೆ ಬೆಲ್ಲದ ಸಂಪರ್ಕ ಸಿಹಿ ಒದಗಿಸಿ ಅನುಭೂತಿಯನ್ನು ಬದಲಾಯಿಸುವ ಹಾಗೆ ಮಾತಿಗೆ ಮಧುರತೆ ಜೊತೆಯಾದಾಗ ದೃಷ್ಟಿಕೊನವೇ ಬದಲಾಯಿಸುವ ಶಕ್ತಿ ಹೊಂದಿರುತ್ತದೆ.

ಹೀಗೆ ಬೆಸೆಯುವ, ಬಂಧಿಸುವ ಗುಣ ಹೊಂದಿರುವ ಆರೋಗ್ಯಕರವಾದ ಎಳ್ಳು ಬರೀ ಹೊಗಳಿಕೆ ಮಾತ್ರ ಪಡೆದುಕೊಂಡಿದೆಯಾ ಎಂದರೆ ಅಷ್ಟೇ ತೆಗಳಿಕೆಗೂ ಪಾತ್ರವಾಗಿದೆ.  ಯಾರಾದರೂ ಕಿಂಚಿತ್ತೂ ಪ್ರಯೋಜನಕಾರಿಯಾಗದೆ ಹೋದರೆ, ಸ್ವಲ್ಪವೂ ನಂಬಿಕೆಗೆ ಅರ್ಹನಲ್ಲದೆ ಹೋದರೆ ಅಲ್ಲಿ ಹೋಲಿಕೆಗೆ ಬಳಕೆಯಾಗುವುದು ಇದೆ ಎಳ್ಳು. ಎಳ್ಳು ಕಾಳಿನಷ್ಟೂ ಉಪಯೋಗವಿಲ್ಲ ಎಂದು ಯಾವುದರ ಬಗ್ಗೆಯಾಗಲಿ, ಯಾರ ಬಗ್ಗೆಯಾಗಲಿ ಹೇಳಿದರೆ ಅಲ್ಲಿಗೆ ಅದು ಶುದ್ಧ ಅಪ್ರಯೋಜಕ ಎಂದೇ ಅರ್ಥ. ಎಳ್ಳಿನ ಮೊನೆಯಷ್ಟು ನಂಬಬೇಡ ಅಂದರೆ ಮುಗಿದೇ ಹೋಯಿತು ಅಲ್ಲಿ ನಂಬಿಕೆ ನಿಷಿದ್ಧ ಎಂದೇ ಅರ್ಥ. ಅದಕ್ಕಿಂತ ಹೆಚ್ಚಾಗಿ  ಎಳ್ಳು ನೀರು ಬಿಟ್ಟ ಹಾಗೆ ಎಂದರೆ ಅಲ್ಲೊಂದು ಸಂಬಂಧ ಶಾಶ್ವತವಾಗಿ ಮುಗಿದು ಹೋಯಿತು ಎಂದರ್ಥ. ಋಣ ಹರಿದುಕೊಳ್ಳುವ ಪ್ರಕ್ರಿಯೆಯಲ್ಲಿ, ಅಂತಿಮ ವಿದಾಯ ಹೇಳುವಾಗ ಹಾಗಾಗಿಯೇ ಎಳ್ಳಿಗೆ ಪ್ರಧಾನ ಪಾತ್ರ.

ಬೆಸೆಯುವುದೇ ತೊಡೆಯಲೂ ಸಮರ್ಥವಾಗಿರುತ್ತದಾ... ಹೇಗೆ ಬಳಸಬೇಕು ಎನ್ನುವುದು ಕಲಿಸಲೆಂದೇ ಪ್ರಕೃತಿ ಹೀಗೆ ಎರಡು ವೈರುಧ್ಯಗಳನ್ನೂ ಒಂದರಲ್ಲೇ ಅಡಗಿಸಿ ನಮ್ಮ ಬುದ್ಧಿವಂತಿಕೆಯನ್ನು ಪರೀಕ್ಷೆ ಮಾಡುತ್ತದಾ...ಬರೀ ನಾಣ್ಯಕ್ಕೆ ಮಾತ್ರ ಎರಡು ಮುಖ ಅನ್ನೋದು ಮೂರ್ಖತನ, ಪ್ರತಿಯೊಂದು ವಸ್ತುವಿಗೂ, ಜೀವಕ್ಕೂ ಹೀಗೆ ಎರಡು ವಿಭಿನ್ನ ಮುಖಗಳು, ಗುಣಗಳು ಇವೆಯಾ..  ಹೇಗೆ ಬಳಸಿಕೊಳ್ಳುತ್ತೇವೆ ಅನ್ನುವುದರ ಮೇಲೆ ಗುಣ ನಿರ್ಧಾರವಾಗುತ್ತದಾ... ಅಂಗಡಿಯಿಂದ ತಂದ ಎಳ್ಳು ಹಿಡಿದು ಆಲೋಚಿಸುತ್ತಲೇ ಇದ್ದೇನೆ... ಇನ್ನೇನು ಸಂಕ್ರಾಂತಿ ಹತ್ತಿರದಲ್ಲಿದೆ.

Comments

Popular posts from this blog

ಮಾತಂಗ ಪರ್ವತ

ರಂಜದ ಹೂ

ಬರಿದೆ ಆಡುವ ಮಾತಿಗರ್ಥವಿಲ್ಲ...