ಗೌರಿ ಹಬ್ಬ

ಶ್ರಾವಣ ಮುಗಿದು ಭಾದ್ರಪದ ಬರುವ ಹೊತ್ತಿಗೆ ಬೇಸಾಯದ ಬಹುತೇಕ ಕೆಲಸಗಳು ಮುಗಿದಿರುತ್ತದೆ. ಒಂದೇ ಸಮನೆ ಶ್ರುತಿ ಹಿಡಿದು ಹಾಡುತ್ತಿದ್ದ ಮಳೆಗೂ ಬೇಸರ ಬಂದು ಆಗಾಗ ನಿಲ್ಲಿಸಿ ಸುಮ್ಮನಾಗುತ್ತಿರುತ್ತದೆ. ಸೂರ್ಯನೂ ಸಣ್ಣಗೆ ನಗೆ ಬೀರುವ ಹೊತ್ತಿನಲ್ಲಿ ಕಾಮನಬಿಲ್ಲಿನ ಬಣ್ಣಗಳನ್ನೂ ನಾಚಿಸುವ ವರ್ಣಗಳ ಬಳೆಗಳನ್ನು ಹೊತ್ತು ಬಳೆಗಾರರು ಹೊರಡುವ ಸಮಯವದು. ಭಾಗ್ಯಾದ ಬಳೆಗಾರ ಹೋಗಿ ಬಾ ನನ್ನ ತವರಿಗೆ ಅಂತ ಮಗಳು ಆಸೆಯ ಕಂಗಳಿಂದ ಪಿಸುಗುಡುವ ಹೊತ್ತಿದು. ನಿನ್ನ ತವರು ಎಲ್ಲಿದೆ ಅಂತ ಕೆಣಕಿ ಅವಳ ನೆನಪನ್ನು ಇನ್ನಷ್ಟು ಕೆದಕಿ ಅವುಗಳ ಚಿತ್ತಾರ ಮೂಡಿಸುವ ಗಳಿಗೆಯಿದು.

ಸಸಿ, ನೆಟ್ಟಿ, ಕಳೆ ಅಂತ ಗದ್ದೆ ಕೆಲಸದಲ್ಲಿ ವ್ಯಸ್ತರಾಗಿದ್ದ ಜನಗಳಿಗೆ, ಮಳೆಗೆ, ಗಾಳಿಗೆ ಎಲ್ಲರಿಗೂ ಕೊಂಚ ವಿಶ್ರಾಂತಿ ಸಮಯ. ಸ್ವಲ್ಪ ನಿರಾಳವಾಗುತ್ತಿದ್ದಂತೆ,  ಹೆಣ್ಮಕ್ಕಳಿಗೆ ತವರಿನ ನೆನಪು ಬಿಟ್ಟು ಬಿಟ್ಟು ಸುರಿಯೋ ಮಳೆಯಂತೆ. ಮಳೆ ಬಿಸಿಲ ಚೆಲ್ಲಾಟದ ಕುರುಹೋ ಎಂಬಂತೆ ಮೂಡುವ ಕಾಮನಬಿಲ್ಲು ನೆನಪಿನ ಬತ್ತಳಿಕೆಯನ್ನು ತೆರೆದು ಹೂಡಲು ಪ್ರೇರೇಪಿಸುವ ಹೊತ್ತಿಗೆ ಬಳೆಗಳ ಸದ್ದು. ಶ್ರಾವಣದ ಹಬ್ಬ ಹರಿದಿನಗಳ ಸಂಭ್ರಮದಲ್ಲಿ ಅಮ್ಮಂದಿರಿಗೆ, ಅಜ್ಜಿಯರಿಗೆ ಗೆಜ್ಜೆವಸ್ತ್ರ ಮಾಡುವ ಕೆಲಸ. ಮನೆಯಂಗಳದಲ್ಲಿ ಬೆಳೆದ ಹತ್ತಿಯನ್ನು ಬಿಡಿಸಿ ಬೆಚ್ಚಗೆ ಡಬ್ಬಿಯಲ್ಲಿ ತುಂಬಿ ತಂಡಿಯಾಗದಂತೆ ಅಟ್ಟದಲ್ಲಿಟ್ಟದ್ದನ್ನು ಕೆಳಗಿಸಿ ಅದಕ್ಕೆ ಮುಕ್ತಿ ಕೊಡುವ ಭರಾಟೆ. ಮಧ್ಯಾನದ ಹೊತ್ತಿನಲ್ಲಿ ಅದನ್ನು ಮೆದುವಾಗಿ ಬಿಡಿಸಿ, ಹಿಂಜಿ ಅದನ್ನು ಶುಭ್ರಗೊಳಿಸಿ ಅದನ್ನು ಅಣಿಯಾಗಿಸಿ, ಅನಂತರ ಹೂ ಬತ್ತಿ, ಗೆಜ್ಜೆವಸ್ತ್ರ ಮಾಡುವುದು ಒಂದು ರೀತಿಯಾದರೆ ಗೌರಿ, ಗಣೇಶನಿಗೆ ಮಾಡೋ ಗೆಜ್ಜೆವಸ್ತ್ರದ ತಯಾರಿಯೇ ಬೇರೆ.

ಅದರಲ್ಲೂ ಗೌರಿ ಬಾಗಿನಕ್ಕೆಂದು ಮಾಡುವ ಗೆಜ್ಜೆವಸ್ತ್ರದಲ್ಲಿ ಕೇವಲ ಹತ್ತಿಯಲ್ಲ ಪ್ರೀತಿಯೂ ತುಂಬಿರುತ್ತದೆ. ಹೊಸೆಯುವ ಹತ್ತಿಯಲ್ಲಿ ನೆನಪುಗಳು ಸುರುಳಿಯಾಗಿರುತ್ತದೆ. ಕರಳು ಬಳ್ಳಿ ಮದುವೆಯಾಗಿ ಹೋದಮೇಲೆ ಪ್ರತಿವರ್ಷ ತವರ ನೆನಪಾಗಿ ಅವಳೇ ನೆಟ್ಟ ಅಂಗಳದ ತುದಿಯ ಹತ್ತಿಗಿಡದ ಹತ್ತಿ ತಂದು ಹದಿನಾರು ಎಳೆಯ ಗೆಜ್ಜೆವಸ್ತ್ರ ಮಾಡಿ, ಅದರೊಳಗೆ ಮಮತೆಯ ಬಿಸುಪು ತುಂಬಿ, ಬೇಗಡೆಗಳಿಂದ ಅಲಂಕರಿಸುವಾಗ ಅವಳನ್ನೇ ಅಲಂಕರಿಸಿದ ಭಾವ. ಅದನ್ನು ನಾಜೂಕಾಗಿ ಒಂದು ರಟ್ಟಿನ ಪೆಟ್ಟಿಗೆಯಲ್ಲಿ ಇಟ್ಟು, ಅರಿಸಿನ, ಕುಂಕುಮ, ಬಾಗಿನದ ಸಾಮಾನು ತುಂಬಿ ಅಪ್ಪನ ಕೈಯಲ್ಲೋ, ಅಣ್ಣನ್ನ ಕೈಯಲ್ಲೋ ಅವಳಿಗೆ ಕಳುಹಿಸಬೇಕು. ತವರಿನ ಬಲ ಇದೆ ಅನ್ನುವ ನೆಮ್ಮದಿ ಕೊಡಬೇಕು. ಹೀಗಾದರೂ ತವರು ಅವಳನ್ನು ನೆನಪಿಸಿಕೊಳ್ಳಬೇಕು.

ತವರಿನ ಮೋಹ ದೇವಾನುದೇವತೆಗಳನ್ನೇ ಬಿಟ್ಟಿಲ್ಲವಂತೆ. ಅಂತ ಜಗದೀಶ್ವರನ ಮಡದಿಗೇ  ತವರಿನ ಹಂಬಲ, ಇನ್ನು ಸಾಮಾನ್ಯರ ಮಾತೇನು. ಕೆಲಸದಿಂದ ಹಗುರವಾಗುವ ಹೊತ್ತಿನಲ್ಲಿ ಗೌರಿಗೂ ತವರಿನ ಬಯಕೆ. ಹಾಗಾಗಿಯೇ ಅವಳು ಕೈಲಾಸವನ್ನೂ ಇಳಿದು ಬರುತ್ತಾಳೆ. ಬಂಗಾರ ಮೈ ಬಣ್ಣದ ಆ ಗೌರಿ ಮಂಜಿನ ಬೆಟ್ಟವನ್ನು ಇಳಿದು ಬರುವಾಗ ಅವಳ ಮೈ ಸೋಕುವ ಸೂರ್ಯನ ಕಿರಣಗಳೂ ಹೊಂಬಣ್ಣ ತಳೆದು ಪ್ರತಿಫಲಿಸುತ್ತಿದ್ದವಂತೆ. ಹಾಗಾಗಿಯೇ ಅವಳು ಸ್ವರ್ಣಗೌರಿ. ಆ ಗೌರೀ ತವರಿಗೆ ಬರುವ ದಿನವೇ ಗೌರಿ ಹಬ್ಬ. ಅದರ ನೆನಪಾಗಿ, ಕುರುಹಾಗಿ  ಅವತ್ತು ಎಲ್ಲಾ ಹೆಣ್ಣು ಮಕ್ಕಳು ಸ್ವರ್ಣಗೌರಿ ವ್ರತ ಮಾಡುತ್ತಾರೆ. ತವರನ್ನು ನೆನಪಿಸಿಕೊಳ್ಳುತ್ತಲೇ ಸೌಭಾಗ್ಯವನ್ನೂ ಬೇಡಿಕೊಳ್ಳುತ್ತಾರೆ. ಎರಡೂ ಬೇಕು. ಹಾಗೂ ಎರಡೂ ಚೆನ್ನಾಗಿರಬೇಕು.

ಹಾಗೆ ವ್ರತ ಮಾಡಲು ಅದರಲ್ಲೂ ತವರಿಗೆ ಬಂದ ಗೌರಿಗೆ ತವರಿನ ಗೆಜ್ಜೆವಸ್ತ್ರ ಬಾಗಿನಕ್ಕಿಂತ ಶ್ರೇಷ್ಠವಾದದ್ದ್ದು ಮತ್ಯಾವುದಿದೆ? ಹಾಗಾಗಿ ಬಣ್ಣ ಬಣ್ಣದ, ಚೆಂದದ ವಿನ್ಯಾಸದ ಗೆಜ್ಜೆವಸ್ತ್ರವನ್ನು ತಯಾರಿಸಿ ಅರಿಸಿನ, ಕುಂಕುಮ, ಹೂ, ಹಣ್ಣುಗಳ ಜೊತೆಗೆ ಮದುವೆಯಾಗಿ ಹೋದ ಮಗಳಿಗೆ ಕೊಟ್ಟು ಆಶೀರ್ವದಿಸಿ ಬರುವ ಹೊತ್ತು. ಶ್ರಾವಣ ಮುಗಿಯುತ್ತಾ ಬಂದ ಹಾಗೆ  ಕಣ್ಣು ಪದೇ ಪದೇ ದಾರಿಯತ್ತಲೇ ನೆಟ್ಟು, ನಿರೀಕ್ಷೆಯ ನೂರು ಪ್ರಣತಿಗಳಿಂದ ಕಾಯುತ್ತಿರುತ್ತದೆ. ಅಪ್ಪನೋ, ಅಣ್ಣನೋ ಹೊತ್ತು ತರುವ ಬಾಗಿನಕ್ಕಿಂತ ಅವರನ್ನು ನೋಡುವ ಖುಷಿ, ಅವರ ಅಪ್ಯಾಯತೆಯಲ್ಲಿ ನೆನೆಯುವ ತವಕ. ತವರಿನ ವಿಷಯವನ್ನು ತಿಳಿಯುವ ಪುಳಕ. ಫೋನ್ ಗಳ ಭರಾಟೆ ಅಷ್ಟಿಲ್ಲದ ಕಾಲದಲ್ಲಿ ಇದು ಒಂದು ದೊಡ್ಡ ಸಂಭ್ರಮ. ವರುಷಕ್ಕೊಮ್ಮೆ ಬರುವ ಏಕೈಕ ಸಂಭ್ರಮ. ಅವರು ಬರುವುದು ವಿಳಂಬವಾದಷ್ಟೂ ಕಾತುರ. ಈ ಬಳೆಗಾರನಾದರೂ ಬರಬಾರದ ಅನ್ನೋ ಆತುರ.
ಅವರೂ ಅಷ್ಟೇ ಅಮ್ಮನೋ, ಅಜ್ಜಿಯೋ ಒಪ್ಪವಾಗಿ  ಜೋಡಿಸಿ ಕೊಟ್ಟ ಬಾಗಿನವನ್ನು ಅಷ್ಟೇ ಜೋಪಾನವಾಗಿ ಹೊತ್ತು ತಂದು ಮನೆಯ ಬಾಗಿಲಲ್ಲಿ ಕಾಲಿಡುತ್ತಿದ್ದಂತೆ ಅಲ್ಲೊಂದು ಸಂತಸದ ಹೊನಲು ತಂತಾನೇ ಆವರಿಸುತಿತ್ತು.. ನಿರೀಕ್ಷೆಯ ಸಾಲಿನಲ್ಲಿ ನಿಂತ ನೂರಾರು ಪ್ರಣತಿಗಳು ಧಿಗ್ಗನೆ ಬೆಳಗುತ್ತಿದ್ದವು. ಸುತ್ತೆಲ್ಲಾ ಬೆಳಕು ಚೆಲ್ಲಾಡುತಿತ್ತು. ತಲೆಬಾಗಿಲಲ್ಲೇ ಕಾದು ನಿಂತ ಬಳ್ಳಿ ಸ್ವಾಗತಿಸುತಿದ್ದರೆ ಅಯಾಸವೆಲ್ಲ ಮಾಯಾ. ಮಗಳ ಕಾಲಿಗೆ ಜಿಂಕೆಯ ವೇಗ. ಅವಳಿಗೆ ಎಲ್ಲವನ್ನೂ ಕೊಟ್ಟು ಊಟ ಮಾಡಿ ಹೊರಡುವ ಮುನ್ನ ಕರುಳ ಬಳ್ಳಿಯ ತಲೆ ನೇವರಿಸಿ ಜೇಬಲ್ಲಿ ಜೋಪಾನವಾಗಿ ಮಡಿಚಿಟ್ಟ ದುಡ್ಡು ಕೊಟ್ಟು ಬಳೆ ಇಟ್ಕೋ ಮಗಳೇ ಅನ್ನೋ ಮಾತು, ಆ ನೇವರಿಕೆಯಲ್ಲಿನ ವಾತ್ಸಲ್ಯ, ಕಾಳಜಿ, ಬಿಟ್ಟು ಹೊರಡುವ ವಿಷಾದ, ಅದೆಲ್ಲದರ ಹಿಂದಿನ ಪ್ರೀತಿ ಇವೆಲ್ಲವೂ ಕಣ್ಣಂಚಿನಲ್ಲಿ ಮಳೆ ಸುರಿಸುತ್ತಲೇ ಹೊಮ್ಮುವ ತುಟಿಯಂಚಿನ ಸಣ್ಣ ನಗು, ಮಳೆ ಬಿಸಿಲ ಚೆಲ್ಲಾಟದಲ್ಲಿ ಹೊರಗೆ ಮೂಡುವ ಕಾಮನಬಿಲ್ಲು....
ಇಂಥ ಕಾಮನಬಿಲ್ಲು ಮಾಯವಾಗುವ ಮುನ್ನವೇ ಬಳೆಗಾರರ ಆಗಮನ. ಹಳ್ಳಿಗೆ ಹಳ್ಳಿಯೇ ಅವನ ಸ್ವಾಗತಕ್ಕೆ, ಅವನ ಬರುವಿಕೆಗೆ ಚಾತಕ ಪಕ್ಷಿಯಂತೆ ಕಾಯುತ್ತಿತ್ತು.. ಕಾಯುವಿಕೆಯ ಹಿತ, ಕಾತುರ, ಬಂದಾಗ ಆಗುವ ಸಂತಸ ಎಲ್ಲವೂ ಅಮೂಲ್ಯವೇ. ಸುಲಭವಾಗಿ ದಕ್ಕಿದ್ದು ಅನುಭೂತಿ ನೀಡುವುದಿಲ್ಲ. ರೋಚಕತೆ ಇರುವುದಿಲ್ಲ. ಮನೆ ಮಂದಿಯೆಲ್ಲಾ ಅವನನ್ನು ಸುತ್ತುವರಿದು ಬಳೆಗಳನ್ನು ಆರಿಸಿ ಅದನ್ನು ತೊಡಿಸಿಕೊಳ್ಳುವ ಕ್ಷಣಗಳು ಬದುಕಿನ ಅದ್ಭುತ ಗಳಿಗೆಗಳು. ಅದು ಎಂಥಾ ಬಳೆ.. ಅಚ್ಚ ಕೆಂಪಿನ, ಬಳೆ, ಹಸಿರು ಗಿಚ್ಚಿನ ಬಳೆ, ಕಪ್ಪು ಗೌರಿ ಬಳೆ, ಸಾದಾ ಬಣ್ಣ ಬಣ್ಣದ ಬಳೆ. ಕಾಮನ ಬಿಲ್ಲಿನ ಬಣ್ಣವನ್ನೂ ನಾಚಿಸುವ ವರ್ಣದ ಬಳೆ. ಯಾವುದನ್ನು ಆರಿಸಿಕೊಳ್ಳಬೇಕು ಅನ್ನುವ ಗೊಂದಲ ತುಂಬಿಕೊಂಡೆ ಅರಸುವ, ಆರಿಸಿದಷ್ಟೂ ಆಸೆ ಹುಟ್ಟಿಸುವ ಬಳೆಗಳು.

ಸಾಕು ಸಾಕು ಜಾಸ್ತಿ ದುಡ್ಡಿಲ್ಲ ಅಂತ ಸಣ್ಣಗೆ ಗುಡುಗುವ ಮನೆಯ ಯಜಮಾನನ ದ್ವನಿಯನ್ನೂ ಧಿಕ್ಕರಿಸಿ ಇನ್ನಷ್ಟು ಬಳೆಗಳನ್ನು ತೊಟ್ಟುಕೊಳ್ಳುವ ಧೈರ್ಯ, ಹೆಮ್ಮೆ ಕೊಡುವುದು ಅಪ್ಪ ಕೊಟ್ಟ ಅವನ ಬೆವರಿನ, ಅಮ್ಮ ಜೋಪಾನವಾಗಿ ಎತ್ತಿಟ್ಟ ಅಡುಗೆಮನೆಯ ಡಬ್ಬಿಯ ಘಮದ ಆ ದುಡ್ಡು. ಕೈತುಂಬಾ ಧರಿಸಿದ ಬಳೆಗಳು ಸಂಗೀತ ಹಾಡಿದಾಗಲೆಲ್ಲಾ ಹರಡುವ ತವರಿನ ಪ್ರೀತಿಯ ತರಂಗಗಳು.ಅದನ್ನೊಮ್ಮೆ ಮೆತ್ತಗೆ ನೇವರಿಸಿ ಕೆನ್ನೆಗೆ ಒತ್ತಿಕೊಂಡರೆ ಮತ್ತೆ ತವರಿನ ಅಂಗಳದಲ್ಲಿ ಆಡಿದಂತೆ. ಅದರ ಪ್ರತಿ ಸದ್ದಿಗೂ ನೆನಪು ಚಿಗುರಿದಂತೆ. ಆ ಚಿಗುರ ಪುಳಕ ಅನುಭವಿಸುತ್ತಲೇ, ಮೈ ಮರೆಯುತ್ತಲೇ  ತವರು ಹಸಿರಾಗಿರಲಿ ಅನ್ನೋ ಹಾರೈಕೆಯೂ ಹೊಮ್ಮುತಿತ್ತು.

ಇದೊಂದು ಹಬ್ಬ ಮಾತ್ರ ಹೆಂಗಳೆಯರ ಹಬ್ಬ ಅನ್ನೋದಕ್ಕೆ ಅನ್ವರ್ಥಕವಾಗಿರುತಿತ್ತು. ಈ ಹಬ್ಬಕ್ಕೆ ಹೊಸ ಬಳೆ ತೊಡದ ಯಾವೊಂದು ಹೆಣ್ಣು ಜೀವವೂ ಇರುತ್ತಿರಲಿಲ್ಲ. ಅದೂ ಅಂತಿಂತಾ ಬಳೆಯಲ್ಲಮಣ್ಣಿನ ಬಳೆ. ಮಣ್ಣಿಂದ ಬಂದಿದ್ದು ಮತ್ತೆ ಮಣ್ಣಿಗೆ ಅನ್ನೋ ಭಾವವನ್ನು ಸೂಚಿಸುತಿತ್ತಾ... ಯಾರಿಗೆ ತಾನೇ ಆಲೋಚಿಸಲು ಸಮಯವಿತ್ತು. ಬಣ್ಣದ ಲೋಕದಲ್ಲಿ ಕಳೆದುಹೋಗುವುದೊಂದೇ ಆ ಕ್ಷಣದ ಸಾರ್ಥಕ್ಯ. ಕನಸಿನ ಬಣ್ಣಗಳೆಲ್ಲಾ ಅದರಲ್ಲಿ ಹುಡುಕುವ ಆಸೆ. ಕೈತುಂಬಾ ತುಂಬಿಸಿಕೊಳ್ಳುವ ಬಯಕೆ. ಮತ್ತೆ ಮತ್ತೆ ಅದನ್ನು ನೇವರಿಸಿ ಅದರ ಸ್ಪರ್ಶ ಹಾಗೂ ಸದ್ದಿನಿಂದ ಮೈ ಮರೆಯದ ಯಾವ ಜೀವವಿರಲು ಸಾಧ್ಯ ಹೇಳಿ. ಬಳೆಗಾರನಿಗೂ ಅದೊಂದು ಕಾಲ. ಹಾಗಾಗಿ ಆರಿಸಿದ ಬಳೆಯನ್ನು ಮೆದುವಾಗಿ ಕೈ ತುಂಬಾ ಇಡಿಸುತಿದ್ದ. ಇತ್ತ ಕೈ ತುಂಬಿದರೆ ಅತ್ತ ಅವನ ಹೊಟ್ಟೆ ತುಂಬುತ್ತಿತ್ತು. ಹಾಗಾಗಿ ತನ್ನ ಮಾಯಾ ಲೋಕದ ಬಣ್ಣಗಳನ್ನು ಹರಡಿ, ವರ್ಣಿಸಿ ಇನ್ನಷ್ಟು ಆಸೆ ಉಕ್ಕುವ ಹಾಗೆ ಮಾಡುತಿದ್ದ. ಇದೊಂದು ಹಬ್ಬಕ್ಕೆ ಮನೆಯ ಯಜಮಾನ ಕೂಡಾ ಧಾರಾಳಿಯಾಗಿ ಲೆಕ್ಕಾಚಾರ ಮರೆಯುತಿದ್ದ. ಮಣ್ಣು ಮಾತೃತ್ವ ಉಕ್ಕಲು ಪ್ರಚೋದಿಸುತ್ತಿದ್ದದ್ದು ಹೀಗೆ ಏನೋ...
ಹಾಗೆ ಇಡಿಸಿಕೊಂಡ ಬಣ್ಣ ಬಣ್ಣದ ಬಳೆಗಳು ಹಬ್ಬ ಬರುವ ಮೊದಲೇ ನನ್ನ ತುಂಟಾಟ ತಾಳಲಾಗದೆ ಮರಳಿ ಮಣ್ಣಿಗೆ ವಾಪಾಸ್ ಆಗುತ್ತಿದ್ದವು. ಇದರ ಕೈಯಲ್ಲಿ ಏನೂ ಉಳಿಯೋಲ್ಲ ಕಬ್ಬಿಣದ ಬಳೆ ಮಾಡಿಸಿ ಹಾಕ್ಬೇಕು ಅಂತ ಮಾವ ಗುಡುಗುತ್ತಿದ್ದರೆ ಕಣ್ಣಲ್ಲಿ ಮಳೆ ಹನಿಯುತ್ತಿತ್ತು. ಖಾಲಿಯಾದ ಕೈ ಬದುಕೇ ಖಾಲಿಯಾದ ಭಾವ ತುಂಬುತ್ತಿತ್ತು. ದುಃಖ ಹೀಗೆ ಹೆಪ್ಪುಗಟ್ಟಿ ಹನಿಯುತ್ತಲೇ ಹೋಗುವವಳನ್ನು ಶೋಭಣ್ಣ ಅನ್ನುವ ಕರೆ ಹಿಡಿದು ನಿಲ್ಲಿಸುತ್ತಿತ್ತು. ತಿರುಗಿ ನೋಡಿದರೆ ಕೈಯಲ್ಲಿ ದುಡ್ಡು ಹಿಡಿದು ನಿಂತಿರುತಿದ್ದ ಅಪ್ಪಾ ಕಾಣಿಸುತ್ತಿದ್ದ. ತಗೋ ಬಳೆ ಇಟ್ಕೋ ಅಂತ ಜೇಬಿಂದ ತೆಗೆದು ದುಡ್ಡು ಕೊಡುತಿದ್ದರೆ ಮಳೆ ನಿಂತು ಕಾಮನಬಿಲ್ಲು ಕುಣಿಯುತಿತ್ತು. ಸುತ್ತೆಲ್ಲಾ ಸಂಭ್ರಮ ಹರಡುತಿತ್ತು. ಮೋಡ ಸರಿದು ಸೂರ್ಯ ಖಿಲ್ಲನೆ ನಗುತಿದ್ದ. ಎತ್ತ ನೋಡಿದರೂ ಹಸಿರೇ ಹಸಿರು, ಉಸಿರಿಗೂ ನವಿಲಿನ ನರ್ತನ.

ಮಂಟಪ ಕಟ್ಟಿ, ಬಣ್ಣ ಬಣ್ಣದ ಕಾಗದಗಳಿಂದ, ತೋರಣದಿಂದ ಅಲಂಕರಿಸಿ ಬೆಳಿಗ್ಗೆ ಎದ್ದು ಮಡಿಯಲ್ಲಿ ಬಾವಿಗೆ ಹೋಗಿ ಗಂಗೆ ಪೂಜೆ ಮಾಡಿ ಅಲ್ಲಿಂದ ತಂದ ಗಂಗೆಯನ್ನು ಕಳಶದಲ್ಲಿಟ್ಟು ಗೌರಿಯನ್ನು ಆಹ್ವಾನಿಸಿ ವ್ರತ ಶುರುವಾಗುತ್ತಿತ್ತು. ಕರೆತರಲು ಮನೆಮಂದಿಯ ಮೆರವಣಿಗೆ, ಜಾಗಟೆ, ಶಂಖಗಳ ನಿನಾದ, ಹೊಸ ಬಟ್ಟೆಯ ಸರಪರ ಸದ್ದಿಗೆ ಜೊತೆಯಾಗುತಿದ್ದ ಬಳೆಗಳ ಕಿಂಕಿಣಿ, ಯಾರು ಜೋರಾಗಿ ಜಾಗಟೆ ಹೊಡಿತಾರೆ ಅನ್ನೋ ಸ್ಪರ್ಧೆ. ತವರಿಗೆ ಕರೆತರುವಾಗ ಇಷ್ಟೂ ಗೌಜು, ಗದ್ದಲ ಇಲ್ಲದಿದ್ದರೆ ಹೇಗೆ? ಸ್ವಾಗತಿಸುವವರ ಉತ್ಸಾಹವೆ ಇಲ್ಲದಿದ್ದರೆ ಬರುವವರಿಗೂ ನಿರಾಸೆ. ಅದಾಗಬಾರದು, ಮಗಳು ನೋಯಬಾರದು.

ಅಲ್ಲಿಯವರೆಗೂ ಉತ್ಸಾಹದಿಂದ ಕುಣಿಯುತಿದ್ದ ಮಕ್ಕಳಿಗೆ ಗೌರಿ ಒಳಗೆ ಬಂದ ಮೇಲೆ ವಿರಾಮ. ವ್ರತ ಏನಿದ್ದರೂ ಹಿರಿಯರ ಪಾಲಿಗೆ. ಆದರೆ ವ್ರತ  ಮುಗಿದ ಮೇಲೆ ಪೂಜೆ ಮಾಡಿದ ಗೌರಿ ದಾರದ ಬಣ್ಣಕ್ಕಾಗಿ ಕಚ್ಚಾಟ ಶುರುವಾಗುತ್ತಿತ್ತು. ಶ್ರದ್ಧೆಯಿಂದ ನಮಸ್ಕಾರ ಮಾಡಿ ಈ ಬಣ್ಣದ ದಾರ ಕಟ್ಟಿ ಅಂತ ಅಜ್ಜನ ಬಳಿ ಗೋಗೆರೆದರೆ ಬಣ್ಣ ಯಾವುದಾದರೇನು ಮಗು ರಕ್ಷೆ ಮುಖ್ಯ, ಎಂದು  ನಗುತ್ತಲೇ ಹೇಳಿದ ಬಣ್ಣದ ದಾರವನ್ನು ಕಟ್ಟುತಿದ್ದರು. ಆ ಬಣ್ಣ ಪ್ರತಿಫಲಿಸಿ ಮುಖದಲ್ಲಿ ನಗುವಿನ ಓಕುಳಿ ಚೆಲ್ಲಾಡುತಿತ್ತು. ಅರಿವಿಲ್ಲದೆ ಮಂಡಿ ಗೌರಿಯ ಎದುರು ಊರಿ ಕಣ್ಣು ಮುಚ್ಚಿದರೆ ಅವ್ಯಕ್ತ ಭಾವ ಒಳಗಿಳಿಯುತಿತ್ತು.

 ಇದ್ದಕ್ಕಿದ್ದಂತೆ ಹೇಳದೆ ಕೇಳದೆ ಗೊತ್ತೇ ಆಗದಂತೆ ಅಪ್ಪ ಕೈ ಬಿಡಿಸಿಕೊಂಡು ನಡೆದಾಗ ಗೌರಿ ಹಬ್ಬವೆಂದರೆ ಮೋಡಕವಿದ ಆಕಾಶ. ಅತ್ತ ಮಳೆಯೂ ಸುರಿಯದ, ಇತ್ತ ಬಿಸಿಲು ಬಾರದ ಕಪ್ಪನೆಯ ಮೇಘಗಳು ಸುತ್ತುವರೆದು ಬದುಕಿಗೆ ಕತ್ತಲೆ ತುಂಬಿಬಿಡುತ್ತಿದ್ದವು. ನಿರೀಕ್ಷೆಯ ಮಳೆ ಸುರಿದು ಅಪ್ಪನೆಂಬ ಸೂರ್ಯ ಬರಲಾರನೆಂಬ ಸತ್ಯ ಅರಿವಾದ ಮೇಲೆ ಕೈಯಲ್ಲಿ ಕಾಮನಬಿಲ್ಲು ಮೂಡಿಸುವ ಆಸಕ್ತಿ ಸತ್ತು  ಮನಸ್ಸಿಗೊಂದು ಬಂಡೆಮುಚ್ಚಿ ಮೌನವಾಗಿದ್ದೆ. ಮಗಳು ಹುಟ್ಟಿದ ಮೇಲೆ ಒಂದು ವರ್ಷವೂ ತಪ್ಪದೆ ಅವಳಪ್ಪ ಬಳೆ ತಂದು ತೊಡಿಸಿ ಸಂಭ್ರಮಿಸುವುದನ್ನ ನೋಡಿ ತೃಪ್ತಿಯಾದರೂ ಒಳಗೆ ಅಪ್ಪ ಕಾಡುತ್ತಲೇ ಇರುತ್ತಿದ್ದ. ಮತ್ತೆ ಮತ್ತೆ ಬಾಗಿಲ ಕಡೆಗೆ ಹರಿಯುವ ಕಣ್ಣಿಗೆ ಅಂಕುಶ ಹಾಕಲು ಸೋತು ಬಿಟ್ಟು ಬಿಟ್ಟಿದ್ದೇನೆ.
ಬೆಳಿಗ್ಗೆ ಇದ್ದಕ್ಕಿಂದಂತೆ ಸತ್ತ ಭೂತವನ್ನೆತ್ತಿ ತಂದು ಹಾಕಿದ ನೆನಪೆಂಬ ಹದ್ದು ಕುಕ್ಕಿ ಕುಕ್ಕಿ ಕೊಲ್ಲುತಿತ್ತು. ಅದರ ಕಬಂಧ ಬಾಹುಗಳಿಂದ ತಪ್ಪಿಸಿಕೊಳ್ಳಲು ಹೊರಗೆ ಹೊರಟರೆ ಮೋಡಗಟ್ಟಿದ ಆಕಾಶ ದಿಟ್ಟಿಸಿ ನೋಡುತ್ತಿತ್ತು. ಶಾಪಿಂಗ್ ಮುಗಿಸಿ ಹೊರಬರುತ್ತಿದ್ದಂತೆ ಅಣ್ಣನ ಫೋನ್ ಪುಟ್ಟಿ ಅಕೌಂಟ್ ಗೆ ದುಡ್ಡು ಹಾಕಿದೀನಿ. ಗೌರಿ ಹಬ್ಬಕ್ಕೆ ನಿಂಗೆ ಮತ್ತು ಅಹಿಗೆ, ಇಬ್ರೂ ಸಮವಾಗಿ ಹಂಚ್ಕೊಳ್ಳಿ. ಯುದ್ಧ ಶುರುವಾದರೆ ಸಂಧಾನ ಮಾಡೋಕೆ ಬರಲು ರಜೆಯಿಲ್ಲ ಅಂದ. ಸ್ಕೂಟಿ ಸ್ಟಾರ್ಟ್ ಮಾಡುವಾಗ ಸಣ್ಣಗೆ ಹನಿಯಲು ಶುರುವಾದ ಮಳೆ ಮನೆಗೆ ಬರುವ ವೇಳಗೆ ನಿಂತು ಎಳೆ ಬಿಸಿಲು ಹರಡಿತ್ತು. ಕತ್ತೆತ್ತಿ ನೋಡಿದರೆ ಕಾಮನಬಿಲ್ಲು....  ಮನದಂಗಳದಲ್ಲಿ ನೂರು ಬಣ್ಣಗಳ ರಂಗೋಲಿ... ಗೌರಿ ಅದಾಗಲೇ ಬಂದಿರಬಹುದಾ.....

Comments

Popular posts from this blog

ಮಾತಂಗ ಪರ್ವತ

ರಂಜದ ಹೂ

ಬರಿದೆ ಆಡುವ ಮಾತಿಗರ್ಥವಿಲ್ಲ...