ಕಿಮ್ಮನೆ ರತ್ತಾಕರ್.

ಕಿಮ್ಮನೆ ರತ್ನಾಕರ್ ಅವರಿಗೊಂದು ಬಹಿರಂಗ ಪತ್ರ.

ನಿಮ್ಮ ವೃತ್ತಿಯನ್ನೇ ನಾನೂ ಆಯ್ದುಕೊಂಡು ನಿಮ್ಮನ್ನು ಗಮನಿಸಿದ್ದಕ್ಕೆ ಏನೋ ನಿಮ್ಮ ಬಗ್ಗೆ ಮೊದಲಿಂದಲೂ ಒಂದು ಗೌರವ, ಪ್ರೀತಿ ಸದಾ ಇದೆ. ನನ್ನ ಸೀನಿಯರ್ ಮೀಗಾ ಚಂದ್ರಶೇಖರ್ ಅವರನ್ನು ಎಷ್ಟು ಗೌರವಿಸುತ್ತಿದ್ದೇನೋ ಅಷ್ಟೇ ನಿಮ್ಮನ್ನೂ ಗೌರವಿಸುತಿದ್ದೆ. ನಿಮ್ಮ ಸ್ವಭಾವ, ಗುಣಗಳು ನನ್ನನ್ನೂ ಪ್ರಭಾವಿಸಿದ್ದವು. ನಿಮ್ಮೊಳಗಿನ ಮನಸ್ಸು ಅರ್ಥವಾಗಿತ್ತು. ಹಾಗಾಗಿಯೇ ನಿಮ್ಮೆಡೆಗೆ ನನ್ನ ಪ್ರೀತಿ ಸದಾ ಇತ್ತು.

ಪ್ರತಿ ವ್ಯಕ್ತಿಗೂ ತನ್ನ ಊರು, ಬಾಲ್ಯ ಹಾಗೂ ಆ ಬಾಲ್ಯವನ್ನು ಶ್ರೀಮಂತಗೊಳಿಸಿದ ಊರಿನ ಸಾಂಸ್ಕೃತಿಕ ಚಟುವಟಿಕೆಗಳ ಬಗ್ಗೆ ಸದಾ ಹೆಮ್ಮೆ ಇದ್ದೇ ಇರುತ್ತದೆ. ಅಲ್ಲಿನ ದಿನಚರಿ ಬದುಕಿನ ಭಾಗವಾಗಿರುತ್ತದೆ. ಅಲ್ಲಿಯ ಪ್ರತಿ ಘಟನೆಗಳೂ ಉಸಿರಿನೊಂದಿಗೆ ಮಿಳಿತವಾಗಿರುತ್ತದೆ. ಅಲ್ಲಿ ಏನೇ ವ್ಯತ್ಯಾಸವಾದರೂ ಬದುಕು ಚಡಪಡಿಸುತ್ತದೆ. ಎಲ್ಲಿಯೇ ಹೋಗಿ ಬದುಕು ಕಟ್ಟಿಕೊಂಡರೂ ಹಾಗೆ ಗಟ್ಟಿಯಾಗಿ ನಿಲ್ಲಲು, ಹಬ್ಬಲು ಸಹಾಯ ಮಾಡೋದು ಅಧಾರ ಕೊಡೋದು ಬೇರು, ಆ ಬೇರು ಊರಲ್ಲಿ ಇರುತ್ತೆ ಅನ್ನೋ ಸತ್ಯ ಪ್ರತಿಯೊಬ್ಬರಲ್ಲೂ ಅಂತರ್ಗತ. ನಾನೂ ಬೆಳೆದಿದ್ದು ಹೀಗೆ. ಇವತ್ತಿಗೂ ಮೃಗವಧೆ ನನ್ನ ಉಸಿರು. ಬದುಕಿನ ಬೇರು.

 ಕಷ್ಟ, ನಷ್ಟ, ಸಂತೋಷ, ತಲ್ಲಣ  ಏನೇ ಇದ್ದರೂ ನಾವು ಹೋಗುವುದು ಮಲ್ಲಿಕಾರ್ಜುನನ ಬಳಿಯೇ. ಅಪ್ಪ, ಅಮ್ಮ ಇದ್ದ ಹಾಗೆ ಮಲ್ಲಿಕಾರ್ಜುನ ಕೂಡ ಬದುಕಿನ ಒಂದು ಅವಿಭಾಜ್ಯ ಭಾಗ. ಇಡೀ ಊರಿಗೆ ಊರೇ ಅವನನ್ನು ಬಿಟ್ಟು ಏನನ್ನೂ ಮಾಡಲಾರದಷ್ಟು ಅವನೊಂದಿಗೆ ಬೆಸೆದುಕೊಂಡಿದ್ದೇವೆ. ಅವನೇ ಹೆಗಲು, ಅವನೇ ಸಂಗಾತಿ, ಅವನೇ ಗುರು. ಒಟ್ಟಿನಲ್ಲಿ ನಮ್ಮಗೆ ಎಲ್ಲವಕ್ಕೂ ಅವನೇ. ಆ ಸ್ಥಳದ ಚಾರಿತ್ರಿಕ ಹಿನ್ನಲೆಯೂ ಏನೂ ಕಡಿಮೆಯದಲ್ಲ. ಅದು ನಿಮಗೂ ಗೊತ್ತಿದ್ದರಿಂದಲೇ ತಾನೇ ನಂದಿತಾ ಪ್ರಕರಣದಲ್ಲಿ ನನ್ನ ಮೇಲೆ ವಿರೋಧ ಪಕ್ಷ ಮಾಡುತ್ತಿರುವ ಆರೋಪಕ್ಕೆ ಉತ್ತರವಾಗಿ ಮೃಗವಧೆಗೆ ಪಾದಯಾತ್ರೆ ಮಾಡುತ್ತೇನೆ ಅಂತ ನೀವಂದಿದ್ದು.

ಇಂತ ಪುಟ್ಟ ಊರಿನಲ್ಲಿ ಇರುವ ನಮಗೆ ಸಂಭ್ರಮ ಪಡಲು ನಮ್ಮದೇ ಆದ ಕಾರ್ಯಕ್ರಮಗಳಿವೆ. ಅದರಲ್ಲಿ ಮುಖ್ಯವಾದದ್ದು ಮಲ್ಲಿಕಾರ್ಜುನನ ರಥೋತ್ಸವ. ಅದು ಕೇವಲ ಊರಿನ ಹಬ್ಬ ಮಾತ್ರವಲ್ಲ, ಎಲ್ಲಾ ಕಡೆ ಇರುವ ಅವನ ಭಕ್ತರ ಹಬ್ಬ, ತಮ್ಮ ಕೃತಜ್ಞತೆ ಸೂಚಿಸಲು ಅವರಿಗೆ ಸಿಕ್ಕ ಅವಕಾಶ. ಅನವರತ ನಮ್ಮ ಕಾಯ್ವ ನಿರಾಡಂಬರ ಶಿವನನ್ನು ನಮ್ಮ ಅಭೀಷ್ಟೆಯ ಪ್ರಕಾರ ಸಿಂಗರಿಸಿ ಎಲ್ಲರೂ ಸೇರಿ ಅವನಿಗೆ ಕೃತಜ್ಞತೆ ಸಲ್ಲಿಸುವ ಅವಕಾಶ. ಮುಜುರಾಯಿ ಇಲಾಖೆಗೆ ಒಳಪಟ್ಟಿರುವ ದೇವಸ್ಥಾನ ಅದಾದ್ದರಿಂದ ಸರ್ಕಾರದಿಂದ ಎಷ್ಟು ಅನುದಾನ ಸಿಗುತ್ತೆ ಅನ್ನೋದು ಅದೇ ಸರ್ಕಾರದ ಭಾಗವಾಗಿರುವ ನಿಮಗೂ ತಿಳಿದ ಸತ್ಯ. ಅದರ ಆದಾಯ ಬೇಕೇ ಹೊರತು ಅಭಿವೃದ್ಧಿ ಬೇಕಿಲ್ಲ. ನಾವು ಹಿಂದೂಗಳು ವಿಶಾಲ ಮನೋಭಾವದ ಹೆಸರಲ್ಲಿ ಅದನ್ನೂ ಒಪ್ಪಿಕೊಂಡು ಉಸಿರೆತ್ತದೆ ಒಪ್ಪಿಕೊಂಡಿದ್ದೇವೆ.

ಅಲ್ಲಿನ ಉತ್ಸಾಹಿ ಯುವಕರು ತಮ್ಮದೇ ಸಂಘವನ್ನು ಕಟ್ಟಿಕೊಂಡು ಶ್ರಮದಾನ ಮಾಡುವ ಮೂಲಕ, ಅವನ ಭಕ್ತರನ್ನು ಸಂಪರ್ಕಿಸಿ ಅವರ ಸಹಾಯವನ್ನು ಬೇಡಿ ಅಲೆದು ಧನ ಸಂಗ್ರಹಿಸಿ ಅವನ ಜಾತ್ರೆಯನ್ನು ಸಂಭ್ರಮಿಸುತ್ತಾರೆ. ಪ್ರತಿ ಪೈಸೆಯ ಲೆಕ್ಕವನ್ನು ಅವನ ಎದುರು ಇಟ್ಟು ನಿರಾಳವಾಗುತ್ತಾರೆ. ಒಮ್ಮೆ ಹೋಗಿ ನೋಡಿ ಬೇಸಿಗೆಯ ಬಿಸಿಲಲ್ಲಿ ಕಾದ ಕಲ್ಲುಗಳ ಮೇಲೆ ಕಾಲನ್ನು ಸುಟ್ಟುಕೊಂಡು ಪ್ರದಕ್ಷಿಣೆ ಹಾಕುತ್ತಿದ್ದ, ನಿಲ್ಲಲ್ಲು ಒದ್ದಾಡುತಿದ್ದ ಜಾಗದಲ್ಲಿ ಇವತ್ತು ದೊಡ್ಡದೊಂದು ಮಾಡು ಎದ್ದು ನಿಂತಿದೆ. ನೆರಳಾಗಿದೆ. ಅದನ್ನು ಮಾಡಿದ್ದು ಅದರ ಹಣವನ್ನು ತಿಂದ ಸರ್ಕಾರವಲ್ಲ, ಅಪವಾದ ಬಂದಾಗ ಅವನನ್ನು ನೆನಪಿಸಿಕೊಂಡು ಮಾತಾಡುವ ಮೈಲೇಜ್ ತೆಗೆದುಕೊಳ್ಳುವ ಜನಪ್ರತಿನಿಧಿಗಳೂ ಅಲ್ಲಾ. ದೇವಸ್ಥಾನವನ್ನೇ ಉಸಿರಾಗಿಸಿಕೊಂಡ ಅಲ್ಲಿನ ಸ್ಥಳೀಯ ಯುವಕರು.

ಇಂತಿರ್ಪ ದೇವಸ್ಥಾನ ಬಂದ ಪ್ರತಿಯೊಬ್ಬರಿಗೂ ನೆಮ್ಮದಿ ಕೊಡುತ್ತಿತ್ತು. ಬೆಂದ ಮನಸ್ಸಿಗೆ ಶಾಂತಿ ಕೊಡುತ್ತಿತ್ತು. ಭಾರ ಹೊತ್ತು ತಂದವರಿಗೆ ಹೆಗಲಾಗಿ ಹಗುರಾಗಿಸುತಿತ್ತು. ಮನುಷ್ಯರನ್ನು ಮನುಷ್ಯರಾಗಿಯೇ ಕಾಣುತಿತ್ತು. ಇಂಥ ದೇವಸ್ಥಾನಕ್ಕೆ, ಅಲ್ಲಿಯ ವಾತಾವರಣಕ್ಕೆ ರಾಜಕೀಯ ರಂಗು ಇದ್ದಕ್ಕಿಂದಂತೆ ಬಂದದ್ದು ಎಲ್ಲಿಂದ ಅಂತ ಹುಡುಕುತ್ತಾ ಹೋದರೆ ಅದು ಬಂದು ನಿಂತಿದ್ದು ನಿಮ್ಮ ಬಳಿಗೆ. ಹೇಳಿ ಕಿಮ್ಮನೆಯವರೇ ಇಲ್ಲೂ ರಾಜಕೀಯ ಮಾಡಿ ಜಾತ್ರೆಯ ಸಾಂಸ್ಕೃತಿಕ ಕಾರ್ಯಕ್ರಮ  ನಿಲ್ಲಿಸಲು, ಪರ್ಮಿಷನ್ ಕೊಡದಿರಲು ನೀವು ಒತ್ತಡ ಹಾಕಿದ್ದಿರಲ್ಲ ನಿಮ್ಮ ಆತ್ಮಸಾಕ್ಷಿಯನ್ನು ಒಮ್ಮೆ ಕೇಳಿಕೊಂಡು ನೋಡಿ ಇದು ಸರಿಯೆನ್ನಿಸುತ್ತಾ...

ನೀವು ಕಾಂಗ್ರೆಸ್ ಗೆ ಅಡಿಯಿಡುವ ಮುಂಚಿನಿಂದಲೂ, ಹುಟ್ಟಿನಿಂದಲೂ ಅದೇ ಪಕ್ಷದಲ್ಲಿರುವ, ಅದಕ್ಕಾಗಿ ಕೆಲಸ ಮಾಡುವ ಗುಮುಟ ಚಿದಂಬರ್,  ನಿಮ್ಮ ಒಡನಾಡಿಯೂ ಆಗಿರುವ  ಅರಮನೆ ಕೇರಿ ಉದಯಶಂಕರ್ ಇವುರುಗಳು ಸಹ ಅದೇ ದೇವಸ್ಥಾನದ ಆಢಳಿತ ಸಮಿತಿಯಲ್ಲಿರುವುದು ನಿಮಗೆ ತಿಳಿಯದ ವಿಷಯವೇ? ಅಲ್ಲಿನ ಜಾತ್ರೆಯ ಸಾಂಸ್ಕೃತಿಕ ಕಾರ್ಯಕ್ರಮಗಳು ಎಷ್ಟು ವರ್ಷಗಳಿಂದ ಹೇಗೆ  ನಡೆಯುತ್ತಿವೆ ಎಷ್ಟು ಹೊತ್ತಿನವರೆಗೂ ನಡೆಯುತ್ತದೆ ಅನ್ನೋದು ಅವರನ್ನು ಒಮ್ಮೆ ವಿಚಾರಿಸಿದರೆ ಗೊತ್ತಾಗುತ್ತಿರಲಿಲ್ಲವೇ. ಕೊನೆಯ ಪಕ್ಷ ಊರು ತನ್ನ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ರಾಜಕೀಯ ಪಕ್ಷವಾಗುವುದಿಲ್ಲ ಕೇವಲ ಮನುಷ್ಯರಾಗಿರುತ್ತಾರೆ, ಹಾಗೂ ಆ ಊರಿನ ಭಾಗವಾಗಿರುತ್ತಾರೆ ಅನ್ನೋ ಸಣ್ಣ ಸತ್ಯವನ್ನೂ ಆಲೋಚಿಸದಷ್ಟು ನಿಮ್ಮ ಮನಸ್ಸನ್ನು ಮಂಕಾಗಿಸಿದೆಯೇ ರಾಜಕೀಯ.

ಏನೇ ಸಿದ್ಧಾಂತ ಭಿನ್ನಾಭಿಪ್ರಾಯಗಳಿದ್ದರೂ ನಿಮ್ಮ ಬಗ್ಗೆ ನನಗೆ ಗೌರವಿತ್ತು, ಎಲ್ಲಾ ರಾಜಕೀಯದಾಚೆ ನೀವೊಬ್ಬರು ಮನುಷ್ಯರು ಅನ್ನೋ ಹೆಮ್ಮೆಯಿತ್ತು. ಜನರ ದೈನಂದಿನ ಬದುಕಿನಲ್ಲಿ ರಾಜಕೀಯ ಬೆರೆಸದ ಮಾನವೀಯತೆ ನಿಮ್ಮಲ್ಲಿದೆ ಅನ್ನೋ ಪ್ರೀತಿಯಿತ್ತು. ನೀವು ಮೃಗವಧೆಗೆ ಪಾದಯಾತ್ರೆ ಮಾಡುತ್ತೇನೆ ಅಂದಾಗ ನನ್ನ ಊರು ಹಾಗೂ ನಿಮ್ಮ ಬಗ್ಗೆ  ಎದೆ ತುಂಬಿ ಬಂದಿತ್ತು. ನಾನೂ ಜೊತೆಯಾಗುತ್ತಿದ್ದೆನೇನೋ. ಆದರೆ ಯಾರೋ ನಾಲ್ಕು ಜನ ಅಪ್ರಬುದ್ಧರ ಮಾತು ಕೇಳಿ ಅಲ್ಲಿದ್ದ ಇತರ ಹಿರಿಯರನ್ನು, ಗೌರವಾನ್ವಿತರನ್ನೂ ಮರೆತು ನೀವು ಪ್ರತಿಕ್ರಿಯಿಸುವಷ್ಟು ಬಾಲಿಶ ವರ್ತನೆ ತೋರಿಸುತ್ತಿರಿ ಅನ್ನೋದು ತಿಳಿದಾಗ ನನಗಾದ ಶಾಕ್ ವಿವರಿಸೋದು ಹೇಗೆ?

ತನ್ನ ಪಾಡಿಗೆ ದೈನಂದಿನ ಕೆಲಸಗಳಲ್ಲಿ ರಾಜಕೀಯ ಬೆರೆಸದೆ, ಸಾಂಸ್ಕೃತಿಕವಾಗಿ ಒಂದಾಗಿದ್ದ ಊರಿನಲ್ಲಿ ರಾಜಕೀಯ ಕೋಲಾಹಲವೆಬ್ಬಿಸುವಷ್ಟು ಮಟ್ಟಿಗೆ ನಿಮ್ಮ ಬುಧ್ಹಿಯನ್ನು ಕಲುಷಿತಗೊಳಿಸಿತೆ ಈ ರಾಜಕೀಯ. ಕಿಮ್ಮನೆಯವರದು ಹಿತ್ತಾಳೆ ಕಿವಿ ಯಾರು ಏನು ಹೇಳಿದರೂ ನಂಬಿ ಬಿಡ್ತಾರೆ ಅನ್ನೋ ಸುದ್ದಿ ಎಲ್ಲಾ ಕಡೆ ಹರಡಿರುವಾಗ ಅವರು ಪ್ರಜ್ಞಾಪೂರ್ವಕವಾಗಿ ಯೋಚಿಸ್ತಾರೆ ಅವರು ಯಾರ ಕೈಗೊಂಬೆಯಲ್ಲ ಅವರದೇ ಆದ ವ್ಯಕ್ತಿತ್ವ ಇದೆ ಎಂದು ಅಂತವರ ಬಳಿ ವಾದಿಸುತಿದ್ದ ನಾನು ಈಗ ಹೇಗೆ ಅವರನ್ನು ಮುಖವೆತ್ತಿ ಮಾತಾಡಿಸಲಿ ಹೇಳಿ ಕಿಮ್ಮನೆಯವರೇ.  ಪಕ್ಷ ಅನ್ನೋದು ನಿಮ್ಮ ವಿವೇಚನಾ ಶಕ್ತಿಯನ್ನು ಕಬಳಿಸುವಷ್ಟು ಮಟ್ಟಿಗೆ ಅದರ ದಾಸರಾಗಿದ್ದಿರಾ ನೀವು?

ಯಾವ ವಿಷಯದಲ್ಲಿ ರಾಜಕೀಯ ಮಾಡಬೇಕು, ಜನರನ್ನು ಒಡೆಯಬೇಕು ಅನ್ನುವುದನ್ನು ನಿರ್ದರಿಸಲಾಗದಷ್ಟು ಮಟ್ಟಿಗೆ ನಿಮ್ಮ ಆಲೋಚನಾ ಶಕ್ತಿ ಸತ್ತಿದೆ ಅನ್ನೋದಾದರೆ ಅಂತಹ ರಾಜಕೀಯಕ್ಕೆ ನನ್ನದೊಂದು ಧಿಕ್ಕಾರವಿರಲಿ. ಒಂದು ಊರಿನ ಜನರ ನಂಬಿಕೆ, ಅವರ ಭಾವನೆಗಳ ಜೊತೆ ಆಟವಾಡಿ ಅದನ್ನು ನಾಶ ಮಾಡುವ ಮಟ್ಟಿಗೆ ನಿಮ್ಮ ನೈತಿಕತೆ ಕುಸಿದಿದೆ ಎಂದರೆ ಅಂತ ರಾಜಕೀಯ ನಿಮಗೆ ಬೇಡವಾಗಿತ್ತು ಕಿಮ್ಮನೆಯವರೇ. ತುಂಬಾ ನೋವಿನಿಂದಲೇ ಈ ಮಾತು ಹೇಳುತಿದ್ದೇನೆ. ನಾನು, ನೀವು ಇಬ್ಬರೂ  ನಂಬುವ ಆ ಮಲ್ಲಿಕಾರ್ಜುನನೇ ನಿಮ್ಮ ವಿವೇಚನೆಯನ್ನು ಜಾಗೃತಗಳಿಸಲಿ, ನಿಮ್ಮನ್ನು ಮತ್ತೆ ಮನುಷ್ಯನನ್ನಾಗಿಸಲಿ ಅನ್ನೋದಷ್ಟೇ ಅವನಲ್ಲಿ ನನ್ನ ಪ್ರಾರ್ಥನೆ.

ಪಕ್ಷ ಬೇಧ ರಹಿತವಾಗಿ ನಿಮ್ಮೊಳಗಿನ ಮನುಷ್ಯನನ್ನು, ದಿಟ್ಟ ವ್ಯಕ್ತಿತ್ವವನ್ನು ಯಾವುದೊ ಪಕ್ಷಕ್ಕೆ ಅಡವಿಟ್ಟು ನಮ್ಮಂಥವರ ಮನಸ್ಸು ಒಡೆಯಬೇಡಿ. ಅಧಿಕಾರ ಶಾಶ್ವತವಲ್ಲ ಅನ್ನೋ ಸತ್ಯ ನಿಮಗೂ ಗೊತ್ತು ಅದು ಪ್ರಜ್ವಲವಾಗಲಿ. ಒಮ್ಮೆ ಗಳಿಸಿದ ಗೌರವ, ಪ್ರೀತಿ ಎಷ್ಟು ಮುಖ್ಯ ಅನ್ನೋದು ನಿಮಗೂ ಗೊತ್ತು. ಯಾವುದೋ ಕ್ಷುಲ್ಲಕ ಕಾರಣಕ್ಕಾಗಿ ಅದನ್ನು ಹಾಳು ಮಾಡಿಕೊಳ್ಳಬೇಡಿ. ದಯವಿಟ್ಟು ನಿಮ್ಮ ರಾಜಕೀಯ ನಮ್ಮಗಳ ಬದುಕಲ್ಲಿ ತಂದು ಒಡೆಯಬೇಡಿ. ಒಡೆಯುವುದು ಯಾರು ಬೇಕಾದರೂ ಮಾಡ್ತಾರೆ ಕಟ್ಟುವ ಸ್ಥಾನದಲಿ ನಿಂತಿರುವ ನಿಮಗೆ ಅದು ಯಾವತ್ತಿಗೂ ಶೋಭೆಯಲ್ಲ.

ಮಲ್ಲಿಕಾರ್ಜುನ ನಿಮ್ಮವನು, ನಮ್ಮವನು ಎಲ್ಲರವನು. ಅವನನ್ನು ಯಾವುದೇ ಪಕ್ಷಕ್ಕೆ ಸೀಮಿತಗೊಳಿಸುವುದರ ಮೂಲಕ ದೇವರನ್ನು ರಾಜಕೀಯ ದಾಳವಾಗಿಸುವ ಕೆಲಸಕ್ಕೆ ನಿಮ್ಮಿಂದ ಮುನ್ನಡಿ ಬಾರದಿರಲಿ. ದಯವಿಟ್ಟು ನಮ್ಮ ಅಸ್ಮಿತೆ ನಮಗೆ ಉಳಿಸಿಕೊಡಿ ಇದು ನನ್ನ ಪ್ರಾರ್ಥನೆ. ನಿಮ್ಮಲ್ಲಿ ಇನ್ನೂ ಗೌರವ ಪ್ರೀತಿ ಇರುವುದರಿಂದಲೇ ಯಾರದೋ ಮಾತಿಗೆ, ಅವಕಾಶವಾದಿತನಕ್ಕೆ ನಿಮ್ಮ ವ್ಯಕ್ತಿತ್ವ ಬಲಿಯಾಗದಿರಲಿ ಅನ್ನೋ ಕಾಳಜಿಗೆ ಈ ಪತ್ರ ಬರೆಯುತಿದ್ದೇನೆ. ಇದೇ  ಆ ಮಲ್ಲಿಕಾರ್ಜುನನಲ್ಲಿ ನನ್ನ ಬೇಡಿಕೆ. ನೀವು ನೀವಾಗೆ ನಮಗೆ ಬೇಕು ಪ್ಲೀಸ್ ನನ್ನ ಮನವಿಯನ್ನ ಒಮ್ಮೆ ಪರಿಶೀಲನೆ ಮಾಡಿ ನಮ್ಮ ಊರಿನ ಸಾಂಸ್ಕೃತಿಕ  ಕಾರ್ಯಕ್ರಮ ಸಾಂಗವಾಗಿ ನೆರವೇರುವ ಹಾಗೆ ಮಾಡ್ತೀರಲ್ಲ...

ಆ ಮಲ್ಲಿಕಾರ್ಜುನ ನಿಮ್ಮನ್ನು ಹರಸಲಿ


ಸುಜಿತ್ ಕೆರೆಕೇರಿ

Comments

Popular posts from this blog

ಮಾತಂಗ ಪರ್ವತ

ರಂಜದ ಹೂ

ಬರಿದೆ ಆಡುವ ಮಾತಿಗರ್ಥವಿಲ್ಲ...