ಹಂಪಿ (ಹೊಸದಿಗಂತ)

ಕಾಲಿದ್ದರೆ ಹಂಪೆ ಸುತ್ತು ಅನ್ನೋದು ಗಾದೆ ಮಾತು. ಹಂಪೆಯ ವ್ಯಾಪ್ತಿ ಹಾಗಿದೆ. ಸುತ್ತಿದಷ್ಟೂ ಜಾಗವಿದೆ, ನೋಡಿದಷ್ಟೂ ನೋಟವಿದೆ. ವಿಜಯನಗರ ಸಾಮ್ರಾಜ್ಯ ಎಂದರೆ ಮೈ ನವಿರೇಳುತ್ತದೆ. ಅದರಲ್ಲೂ ರಾಜಧಾನಿಯಾದ ಹಂಪೆಯ ವೈಭವ,  ಸಾಂಸ್ಕೃತಿಕ, ಅಧ್ಯಾತ್ಮಿಕ, ಆರ್ಥಿಕ, ರಾಜಕೀಯ, ಶಿಲ್ಪಕಲಾ ಎಲ್ಲಾ ಪ್ರಾಕಾರಗಳಲ್ಲೂ ತುತ್ತತುದಿಯನ್ನು ಮುಟ್ಟಿದ ಇನ್ನೊಂದು ಸಾಮ್ರಾಜ್ಯ ಜಗತ್ತಿನಲ್ಲಿ ಇನ್ನೊಂದು ಇಲ್ಲ. ಹಿಂದೆ ಇರಲಿಲ್ಲ, ಮುಂದೆ ಬರುವುದಿಲ್ಲ ಎನ್ನುವ ನಾಣ್ನುಡಿಗೆ ಮುಕುಟಪ್ರಾಯವಾಗಿ, ಅತ್ಯುತ್ತಮ ಉದಾಹರಣೆಯಾಗಿ ನಿಂತಿದ್ದು ವಿಜಯನಗರ ಸಾಮ್ರಾಜ್ಯ ಅದರ ಕಿರೀಟವೇ ನಮ್ಮ ಹಂಪಿ. ಅದು ಸುವರ್ಣಯುಗ.

ನೈಸರ್ಗಿಕವಾಗಿ ದುರ್ಭೇಧ್ಯವಾದ ಜಾಗ. ಒಳಗಿನವರ ಸಹಾಯವಿಲ್ಲದ ಹೊರಗಿನವರಿಗೆ ಕಿಂಚಿತ್ತೂ ಪ್ರವೇಶ ಕೊಡದಂತ ಪ್ರಕೃತಿಯೇ ನಿರ್ಮಿಸಿದ ಪ್ರದೇಶ. ಕಣ್ಣು ಹಾಯಿಸಿದಷ್ಟೂ ದೂರದವರೆಗೆ ಸರಿ ಸುಮಾರು ಮುನ್ನೂರು ಕಿ.ಮಿ ದೂರದವರೆಗೂ ಬೃಹತ್ ಕಲ್ಲು ಬಂಡೆಗಳೇ ಕಾಣಿಸುವ ಎತ್ತ ನೋಡಿದರೂ ಅದನ್ನು ಬಿಟ್ಟು ಬೇರೇನೂ ಕಾಣದ ಜಾಗದಲ್ಲೇ ಇಂತಹದೊಂದು ಸಾಮ್ರಾಜ್ಯ ಕಟ್ಟಿದ್ದು ಅವರ ಸಾಮರ್ಥ್ಯ, ನಮ್ಮ ಹೆಮ್ಮೆ. ಅದೂ ಇಂಥ ದುರ್ಗಮ ಜಾಗದಲ್ಲಿ ಏಕೆ ರಾಜಧಾನಿ ಎಂದರೆ ಬಹುಶಃ ಎರಡು ಕಾರಣಗಳೇನೋ.. ಒಂದು ರಕ್ಷಣೆ ಸುಲಭ , ಇನ್ನೊಂದು ಅಲ್ಲೇ ಹತ್ತಿರದಲ್ಲೇ ಇದ್ದ ವಜ್ರದ ನಿಕ್ಷೇಪ. ಕಲ್ಲಿನಷ್ಟೇ ಗಟ್ಟಿಯಾದ ಸಾಮ್ರಾಜ್ಯ ಕಟ್ಟಿದ ಅಲ್ಲಿಯ ರಾಜರದ್ದು ಅಷ್ಟೇ ಗಟ್ಟಿ ಮನಸ್ಸು ದೃಢ ವ್ಯಕ್ತಿತ್ವ ವಾದರೂ ಕಲ್ಲಿನ ನಡುವೆ ಹಬ್ಬಿದ ಹಸಿರಿನಂತೆ ಮೃದುವಾಗಿಯೂ ಇತ್ತು ಅನ್ನುವುದಕ್ಕೆ ಅಲ್ಲಿನ ಸಾಂಸ್ಕೃತಿಕ, ಅಧ್ಯಾತ್ಮಿಕ ಕಂಪು ಸಾಕ್ಷಿಯಾಗಿತ್ತು.

ಯಥಾ ರಾಜ ತಥಾ ಪ್ರಜಾ ಅನ್ನೋದು ಹಳೆಯ ಗಾದೆ. ಅದಕ್ಕೆ ಸಾಕ್ಷಿ ಈ ಹಂಪೆ. ಅಲ್ಲಿಯ ನಿಸರ್ಗ ದತ್ತ ಕಲ್ಲುಗಳನ್ನು ಬಳಸಿಕೊಂಡು ಅವರು ನಿರ್ಮಿಸಿದ ಶಿಲ್ಪಕಲೆ ಜಗತ್ಪ್ರಸಿದ್ಧ. ಕೇವಲ ರಾಜರು ಮಾತ್ರ ಇದನ್ನು ಕಟ್ಟಿಸಿದರಾ ಎಂದರೆ ಉಹೂ ಅಲ್ಲಿನ ವ್ಯಾಪಾರಿಗಳೂ ಸಹ ತಮ್ಮ ರಾಜನ ದಾರಿಯನ್ನೇ ತುಳಿದಿದ್ದರು ಎನ್ನುವುದಕ್ಕೆ ಅಲ್ಲಿನ ಕಡಲೆಕಾಳು, ಸಾಸಿವೆ ಕಾಳು ವಿಗ್ರಹಗಳೇ ಸಾಕ್ಷಿ. ಹೆಸರು ಕೇಳಿ ಆಕಾರವೂ ಅದೇ ಇರಬೇಕು ಎಂದು ಭಾವಿಸಿ ಹೋದರೆ ಮೂರ್ಖತನದ ಪರಿಚಯವಾಗುತ್ತದೆ. ಏಕಶಿಲಾ ವಿಗ್ರಹಗಳು ಕತ್ತೆತ್ತಿ ನೋಡುವಷ್ಟು ಭವ್ಯ ಹಾಗೂ ಧೀಮಂತವಾಗಿವೆ. ಕಂಡ ಕೂಡಲೇ ಕೈ ಮುಗಿಯುವ ಹಾಗಿವೆ. ಇಡೀ ಹಂಪೆಯಲ್ಲಿ ಲೆಕ್ಕಕ್ಕೆ ಸಿಗದಷ್ಟು ದೇವಾಲಯಗಳಿವೆ. ಸಾಮ್ರಾಜ್ಯ ಬೆಳೆದಂತೆ ಶಿಲ್ಪಕಲೆಯಲ್ಲೂ ಆದ ಬೆಳವಣಿಗೆ ಹಾಗೂ ಕಲೆ ತನ್ನ ತುತ್ತ ತುದಿಯನ್ನು ಮುಟ್ಟಿದ್ದಕ್ಕೆ ನಿದರ್ಶನಗಳಿವೆ. ಆ ಕಾಲದಲ್ಲೇ ಅವರ ಫೋಟೋಗ್ರಫಿ ಸ್ಕಿಲ್ ಪರಿಚಯಿಸುವ ವಿರೂಪಾಕ್ಷ ದೇವಾಲಯದ ನೆರಳು ಬೆಳಕಿನ ಸಂಯೋಜನೆಯ ಪ್ರಾತ್ಯಕ್ಷಿಕೆಯಿದೆ.

ಧರ್ಮ, ಆರ್ಥಿಕ, ರಾಜಕೀಯ, ಕಲೆ ಒಂದಕ್ಕೊಂದು ಪೂರಕವಾಗಿ ಬೆಳೆದರೆ ಒಂದು ಸಾಮ್ರಾಜ್ಯ ಹೇಗೆ ಬೆಳೆಯಬಹುದು, ಯಾವ ಎತ್ತರಕ್ಕೆ ಏರಬಹುದು ಎನ್ನುವುದಕ್ಕೆ ಹಂಪಿ ಅತ್ಯುತ್ತಮ ಉದಾಹರಣೆ. ವಿರೂಪಾಕ್ಷ ದೇವಾಲಯದ ಎದುರಿನ ರಸ್ತೆಯ ಇಕ್ಕೆಲಗಳಲ್ಲಿ ಆಗಿನ ಕಾಲದಲ್ಲೇ ಬಹು ಮಹಡಿಯ ಕಟ್ಟಡಗಳನ್ನು ಕಟ್ಟಿ ಅದನ್ನು ಬಜಾರ್ ಮಾಡಿದ್ದರು.ಅಲ್ಲಿ ಮುತ್ತು ರತ್ನಗಳನ್ನು ಮಾರುತ್ತಿದ್ದರು ಎಂದರೆ ಅವರ ಅರ್ಥಿಕ ಸ್ಥಿತಿ ಹೇಗಿತ್ತು ಎಂದು ಊಹಿಸಬಹುದು. ಅದರ ಜೊತೆಗೆ ಅರಬ್ ದೇಶಗಳಿಂದ ಕುದುರೆಗಳನ್ನು ತರಿಸಿ ಮಾರುತ್ತಿದ್ದರಂತೆ. ಯಾವುದು ಅಲ್ಲಿ ಸಿಗುತ್ತಿರಲಿಲ್ಲ ಹೇಳುವುದು ಕಷ್ಟ. ಅತಿ ದೊಡ್ಡ ಅರ್ಥಿಕ ಕೇಂದ್ರವಾಗಿ ಅದು ಕಾರ್ಯ ನಿರ್ವಹಿಸುತಿತ್ತು. ಒಂದೊಂದು ವಿಜಯಕ್ಕೂ ಒಂದೊಂದು ದೇಗುಲ, ಕಲ್ಲೂ ಕರಗಿ ಬೆಣ್ಣೆಯಂತೆ ಮೃದುವಾಗಿ ಕಲಾವಿದರ ಕೈಯಲ್ಲಿ ಅರಳುತಿತ್ತು. ಎತ್ತ ನೋಡಿದರೂ ಕಲಾಕೃತಿಗಳೇ. ಕಲ್ಲಂತ ಕಲ್ಲನ್ನೂ ದೇವರಾಗಿಸುವ, ಕಲಾಕೃತಿಯಾಗಿಸುವ ಅವರ ಕೌಶಲ್ಯ, ಧೀಮಂತಿಕೆ ಬೆರಗು ಹುಟ್ಟಿಸುತ್ತದೆ.ಇಡೀ ಸಾಮ್ರಾಜ್ಯ ಇದ್ದಿದ್ದೇ ಹಾಗೆ.

ಬರೀ ಇಷ್ಟೇನಾ ಎಂದರೆ ಇದಕ್ಕೂ ಮೀರಿದ ಕೊಂಡಿಗಳು ಇವೆ. ಇಡೀ ರಾಮಾಯಣದಲ್ಲಿ ಪ್ರಮುಖ ಪಾತ್ರ ವಹಿಸಿದ ಜಾಗವೆಂದರೆ ಕಿಷ್ಕಿಂಧೆ. ರಾಮನ ಬದುಕಿನ ಮುಖ್ಯ ಪಾತ್ರ ಅವನ ಬಲಗೈ ಭಂಟ ಎಂದೇ ಪ್ರಸಿದ್ಧನಾದ ರಾಮ ಭಕ್ತ ಹನುಮಂತ ಹುಟ್ಟಿದ ಜಾಗ ಅಂಜನಾದ್ರಿ. ಶಬರಿ ಗುರುವಾದ ಮಾತಂಗ ಮುನಿಗಳ ಆಶ್ರಮ ಇದ್ದಿದ್ದೂ ಶಬರಿ ಗುರುವಿನ ಅಣತಿಯಂತೆ ರಾಮನಿಗೆ ಕಾದಿದ್ದು ಮಾತಂಗ ಪರ್ವತದಲ್ಲಿ. ಇವೆಲ್ಲವೂ ಇರುವುದು ಹಂಪಿಯಲ್ಲೇ. ಹಾಗಾಗಿ ಇದಕ್ಕೆ ಪೌರಾಣಿಕ ಹಿನ್ನಲೆಯೂ ಇದೆ. ಪುರಂದರ ದಾಸರು, ವಿದ್ಯಾರಣ್ಯರು , ವ್ಯಾಸರಾಜರು ಹೀಗೆ ಮಹಾಮಹಿಮರು ನೆಲಸಿದ ಜಾಗವಿದು, ಸಾಧನೆಗೈದ ತಪೋಭೂಮಿ ಕೂಡಾ ಹೌದು. ಹಂಪಿ ಎಂದರೆ ಕೇವಲ ರಾಜ್ಯವಲ್ಲ ಅದು ಎಲ್ಲದರ ಸಂಗಮ. ಹಾಗಾಗಿಯೇ ಅದು ಸುವರ್ಣಯುಗ.  ಇಂಥಾ ಸಾಧನೆ ಮಾಡಿದ ಇನ್ನೊಂದು ಸಾಮ್ರಾಜ್ಯ ಜಗತ್ತಿನಲ್ಲಿಯೇ ಇಲ್ಲ.

ಸುಲ್ತಾನರು ಕೊನೆಯ ಯುದ್ಧದಲ್ಲಿ ಗೆದ್ದ ನಂತರ ವಿಜಯನಗರವನ್ನು ನಾಶಮಾಡಲು ತೆಗೆದುಕೊಂಡ ಕಾಲ ಬರೋಬ್ಬರಿ ಆರು ತಿಂಗಳು ಎಂದರೆ ಅದರ ಅಗಾಧತೆಯನ್ನು ಊಹಿಸಬಹುದು. ಹತ್ತಿರದ ಕಮಲಾಪುರದ ಕೆರೆಯಿಂದ ಇಡೀ ಸಾಮ್ರಾಜ್ಯಕ್ಕೆ ಮಾಡಿದ ನೀರಿನ ವ್ಯವಸ್ಥೆ, ಅದನ್ನು ಬಳಸಿಕೊಂಡು ಆ ಕಲ್ಲಿನ ನಡುವೆಯೇ ಅವರು ಮಾಡಿದ ಕೃಷಿ, ಬೆಳಸಿದ ಹಸಿರು, ಅರಮನೆಯನ್ನು ಕಟ್ಟಿದ ರೀತಿ, ಅಲ್ಲಿನ ಕಮೋಡ್ ವ್ಯವಸ್ಥೆ, ಒಳಚರಂಡಿಗಳು, ಸ್ವಿಮ್ಮಿಂಗ್ ಪೂಲ್ ಗಳು, ಕೆರೆ ಕಟ್ಟೆಗಳು, ರಕ್ಷಣಾ ಕೌಶಲ್ಯ, ಶಿಲ್ಪಕಲಾ ವೈಭವ, ಮೂಲಭೂತ ವ್ಯವಸ್ಥೆಗಳು  ಎಲ್ಲವೂ ಒಂದಕ್ಕಿಂತ ಒಂದು ಮಿಗಿಲು. ಅಂದಿನ ಕಾಲದ ನೀರಿನ ವ್ಯವಸ್ಥೆಯ ಮಣ್ಣಿನ ಪೈಪ್ ಉತ್ಖನನ ಸಮಯದಲ್ಲಿ ಇತ್ತೀಚಿಗೆ ಸಿಕ್ಕಿದ್ದು ಇನ್ನೂ ಕಾರ್ಯ ನಿರ್ವಹಿಸುವ ಸ್ಥಿತಿಯಲ್ಲಿದೆ ಎಂದರೆ ಅದರ ಗುಣಮಟ್ಟ ಹೇಗಿರಬಹುದು. ಹಾಗಾದರೆ ನಾವು ನಿಜವಾಗಲು ಪ್ರಗತಿ ಹೊಂದಿರುವುದು ಹೌದಾ...ಮೂಲಭೂತ ಸೌಕರ್ಯಗಳಲ್ಲಿ ಅಂದು ಇಲ್ಲದ್ದು ಇಂದು ಯಾವುದಿದೆ?

ಸುಲ್ತಾನರ ಅಟ್ಟಹಾಸಕ್ಕೆ ಸಿಲುಕಿ ಇಡೀ ಅರಮನೆಯ ಆವರಣ ಸುಟ್ಟು ಭಸ್ಮವಾಗಿ ಎಲ್ಲಾ ದಾಖಲೆಗಳೂ ಕುರುಹೂ ಉಳಿಯದಂತೆ ನಾಶವಾಗಿ ಹೋಗಿದೆ. ಕೈ ಕಾಲು ಮುಖ ಹೀಗೆ ಅಂಗ ವಿಹಿನವಾಗಿ ನಿಂತಿರುವ ವಿಗ್ರಹಗಳು, ಭಗ್ನಗೊಂಡ ದೇಗುಲಗಳು, ಅವಶೇಷಗಳು ಅವರ ಕ್ರೌರ್ಯಕ್ಕೆ ಸಾಕ್ಷಿಯಾಗಿ ನಿಂತಿವೆ. ಅದಕ್ಕಿಂತಲೂ ಕ್ರೌರ್ಯ ಅನ್ನಿಸೋದು ನಂತರದ ಪರಿಸ್ಥಿತಿ. ಈ ದೇಶದ ಹೆಮ್ಮೆಯ ಗರಿಯಾಗಿದ್ದ ಅದನ್ನು ಈ ದೇಶ ನಿರ್ವಹಿಸಿದ ರೀತಿ. ಅಲ್ಲೇ ಮನೆಯನ್ನು ಕಟ್ಟಿಕೊಂಡು ಅದೇ ಪಳೆಯುಳಿಕೆಗಳ ಮೇಲೆ ಜಾಗದಲ್ಲಿ ಅಡುಗೆ, ನಿತ್ಯಕರ್ಮಗಳನ್ನು ನಡೆಸುತ್ತಾ, ಅಲ್ಲಿರುವ ಕಟ್ಟಡಗಳ ಮೇಲೆ ತಮ್ಮ ಹೆಸರು ಕೆತ್ತುತ್ತಾ, ಕೆಡವುತ್ತಾ ಅದನ್ನು ಹಾಳುಗೆಡವಿದ ಕೀರ್ತಿ ಈ ಮಣ್ಣಿನ ನಮಗೆ ಸಲ್ಲಬೇಕು. ಯುನೆಸ್ಕೋ ಅದನ್ನು ವಿಶ್ವ ಪಾರಂಪರಿಕ ತಾಣ ಎಂದು ಘೋಷಿಸುವವರೆಗೂ ಅದನ್ನು ರಕ್ಷಿಸುವುದು ಇರಲಿ ಅದನ್ನು ಹಾಳುಗೆಡುವವರೇ ಹೆಚ್ಚಿದ್ದರು. ಅಂತಹದೊಂದು ಇತಿಹಾಸವನ್ನು ಉಳಿಸುವ ಹೋಗಲಿ ಗೌರವಿಸುವ ಪ್ರಜ್ಞೆಯೂ ಇಲ್ಲದ ನಾವು ಅದೆಂತಾ ನರಸತ್ತ ಇತಿಹಾಸ ಕಲಿಯುತ್ತಿದ್ದೇವೆ ಅನ್ನಿಸಿದ್ದು ಅದೆಷ್ಟು ಸಲವೋ...


ಹಂಪಿ ಎಲ್ಲರನ್ನು ಸೆಳೆಯುವಂತದ್ದು. ಇತಿಹಾಸದ ಬಗ್ಗೆ ಆಸಕ್ತಿ ಇರುವವರಿಗೆ ಇಲ್ಲಿನ ಸಾಮ್ರಾಜ್ಯ, ಧಾರ್ಮಿಕ ಆಸಕ್ತಿ ಇರುವವರಿಗೆ ದೇಗುಲಗಳು, ಪುರಾಣ ಪ್ರಸಿದ್ಧ ಸ್ಥಳಗಳು, ಕಲಾಸಕ್ತರಿಗೆ ಕಲಾಕೃತಿಗಳು, ಟ್ರೆಕಿಂಗ್ ಪ್ರಿಯರಿಗೆ ಬೆಟ್ಟ ಗುಡ್ಡಗಳು, ಏಕಾಂತ ಬಯಸುವವರಿಗೆ ಅದಕ್ಕೆ ಪುಷ್ಟಿ ನೀಡುವ ಜಾಗಗಳು, ಸಾಧಕರಿಗೆ ತಪೋ ಭೂಮಿಯಂತ ಗುಹೆಗಳು ಹೀಗೆ ಎಲ್ಲಾ ವರ್ಗದವರನ್ನೂ ಆವರಿಸಿ ಕಳೆದುಹೋಗುವಂತೆ ಮಾಡುತ್ತದೆ. ಹೆಜ್ಜೆ ಹೆಜ್ಜೆಗೂ ಒಂದೊಂದು ಕತೆ, ಒಂದೊಂದು ಹಿರಿಮೆ. ಇತಿಹಾಸ ಮರುಕಳಿಸುತ್ತದೆ ಅನ್ನೋದು ಸುಳ್ಳಲ್ಲ. ನಾವು ಸಂಸ್ಕೃತಿಯನ್ನು ಉಳಿಸಿದರೆ ಅದೂ ನಮ್ಮನ್ನು ಉಳಿಸುತ್ತದೆ. ಮುಂದಿನ ಪೀಳಿಗೆ ಸಶಕ್ತವಾಗಿರಬೇಕು ಎಂದರೆ ಹಿಂದಿನ ಪೀಳಿಗೆಯ ಕೊಡುಗೆ ಅಷ್ಟೇ ಇರಬೇಕು. ಹಾಗಾಗಿಯೇ ಇತಿಹಾಸ ಅನ್ನೋದು ಘಟಿಸಿಹೋದ ಘಟನೆ ಮಾತ್ರವಲ್ಲ ಬೆನ್ನೆಲೆಬು. ನಮ್ಮ ಘನತೆ, ನಮ್ಮ ಹಿರಿಮೆ ಹಾಗೂ ಅಸ್ತಿತ್ವ ಎಲ್ಲವೂ. ಹಾಗಾಗಿ ಹಾಳಾಗಿದ್ದು ಹಂಪಿ ಎಂದುಕೊಂಡರೆ ಅದು ನಮ್ಮ ಭ್ರಮೆ ಅಷ್ಟೇ. ಹಾಳಾಗಿದ್ದು ನಮ್ಮ ಮನಸ್ಥಿತಿ. ಮಣ್ಣಾಗಿದ್ದು ನಮ್ಮ ಆತ್ಮಾಭಿಮಾನ.

ಆದರೆ 2014 ರ ನಂತರ ಕಾಲ ಸ್ವಲ್ಪ ಬದಲಾಗಿತ್ತು. ಪ್ರಧಾನಿ ಮೋದಿ ಸ್ವತಃ ತಾವೇ ವೈಯುಕ್ತಿಕ ಆಸಕ್ತಿ ವಹಿಸಿ ಅದನ್ನು ಉಳಿಸುವ ಪ್ರಯತ್ನಕ್ಕೆ, ಸಂಶೋಧನೆಗೆ ಚಾಲನೆ ಕೊಟ್ಟಿದ್ದರು. ಮೊತ್ತ ಮೊದಲ ಬಾರಿಗೆ ಫಂಡ್ ಬಿಡುಗಡೆ ಆಗಿ ಸಮಿತಿ ರಚನೆಯೂ ಆಗಿತ್ತು. ಇದಾಗುತ್ತಿದ್ದ ಹಾಗೆ ಉತ್ಖನನ ಕೆಲಸಗಳಿಗೂ ವೇಗ ದೊರಕಿತ್ತು. ಇಲ್ಲಿ ದೊರಕದ ಮಾಹಿತಿ ದಾಖಲೆ ವಿದೇಶಿ ಯಾತ್ರಿಕನ ಟಿಪ್ಪಣಿಯಲ್ಲಿ ದೊರಕಿ ಅದರ ಅನುಸಾರ ಅಗೆತ ನಡೆಯುತ್ತಿದೆ. ಹಂಪಿಯ ವೈಭವದ ಕುರುಹು ಸಿಗುತ್ತಿದೆ. ಇತ್ತೀಚಿಗಷ್ಟೇ ವಿರೂಪಾಕ್ಷ ದೇವಾಲಯದ ಪಕ್ಕ ಸಿಕ್ಕ ಪುಷ್ಕರಿಣಿ, ಮಣ್ಣಿನ ಪೈಪ್ ಇದಕ್ಕೆ ಕೆಲವು ಉದಾಹರಣೆಗಳು. ಹಂಪಿಯ ಸುತ್ತಲೂ ತಡೆಗೋಡೆ ನಿರ್ಮಾಣ ಆಗುತ್ತಿದೆ. ಅದಕ್ಕೆ ಹಾನಿಯುಂಟು ಮಾಡುವ ಯಾವುದೇ ಕೆಲಸಗಳನ್ನು ಅಲ್ಲಿ ಕೈಗೊಳ್ಳದಂತೆ ನಿರ್ಬಂಧ ಹೇರಲಾಗಿದೆ. 50 ರೂಪಾಯಿಯ ನೋಟಿನಲ್ಲಿ ಹಂಪಿಯ ಕಲ್ಲಿನ ರಥದ ಚಿತ್ರ ಮೂಡಿ ಬಂದಿದೆ. ಹೀಗೆ ಹಂಪಿಯ ಗತವೈಭವ ಹುಡುಕುವ ತಿಳಿಸುವ ಎಲ್ಲಾ ಪ್ರಯತ್ನಗಳು ಈಗ ನಿಧಾನಕ್ಕೆ ಜಾರಿಯಾಗುತ್ತಿದೆ.
 

ಇದಲ್ಲಕ್ಕೆ ಮುಕುಟವಿಟ್ಟಂತೆ ಈಗ ನ್ಯೂಯಾರ್ಕ್ ಟೈಮ್ಸ್ ತಯಾರಿಸಿರುವ ವಿಶ್ವದ ನೋಡಲೇ ಬೇಕಾದ ಸ್ಥಳಗಳ ಪಟ್ಟಿಯಲ್ಲಿ  ಹಂಪಿ ಎರಡನೇ ಸ್ಥಾನ ಪಡೆದಿದೆ. ನಮ್ಮತನವನ್ನು ನಾವೇ ನಿರಾಕರಿಸುವ ಹೊತ್ತಿನಲ್ಲಿ ಬೇರೆಯವರು ಗುರುತಿಸಿರುವುದು ನೋವಿನಲ್ಲೂ ಖುಷಿ ಕೊಡುವ ಸಂಗತಿ. ಸದ್ಯದ ಕೇಂದ್ರಸರ್ಕಾರ ಅದನ್ನು ರಕ್ಷಿಸುವ ಹೊಣೆ ಹೊತ್ತಿರುವುದು ಸಮಾಧಾನ ಕೊಡುವ ವಿಷಯ. ನಿಜವಾದ ಇತಿಹಾಸ ಬೋಧಿಸದೆ ಹೋದರೆ, ನಮ್ಮ ನೆಲದ ಸತ್ವ ಅರಿಯದೆ ಹೋದರೆ ಏನಾಗುತ್ತದೆ ಎನ್ನುವುದಕ್ಕೆ ನಮ್ಮ ದೇಶವೇ ಉದಾಹರಣೆಯಾಗಿ ನಿಲ್ಲುತ್ತದೆ. ಒಂದು ದೇಶಕ್ಕೆ ಆತ್ಮಾಭಿಮಾನ ಬೆಳವಣಿಗೆಗೆ ಎಷ್ಟು ಪೂರಕವೋ ನಿರಭಿಮಾನ ಅಷ್ಟೇ ಮಾರಕ. ಧೂಳು ಕೊಡವಿ ಹಂಪಿ ಎದ್ದು ನಿಲ್ಲಲಿ. ನಮ್ಮ ಆತ್ಮಾಭಿಮಾನದ ಪ್ರತೀಕವಾಗಲಿ. ಮಲಗಿರುವ ಕ್ಷಾತ್ರತ್ವ ಇನ್ನಾದರೂ ಪ್ರಜ್ವಲಿಸಲಿ.


Comments

Popular posts from this blog

ಮಾತಂಗ ಪರ್ವತ

ರಂಜದ ಹೂ

ಬರಿದೆ ಆಡುವ ಮಾತಿಗರ್ಥವಿಲ್ಲ...