ಉರಿ ಸರ್ಜಿಕಲ್ ಸ್ಟ್ರೈಕ್ (ಹೊಸದಿಗಂತ)

ಸುತ್ತ ದಟ್ಟ ಕಾಡು.. ಮಗುವೊಂದು ಹಾಳೆಯ ಮೇಲೆ ಗೀಚಿಬಿಟ್ಟಂತೆ ಹಾದುಹೋಗುವ ರಸ್ತೆ. ಭಯ ಹುಟ್ಟಿಸುವ ನಿಶಃಬ್ಧ... ಆ ನಿಶಃಬ್ಧವನ್ನು ಭೇಧಿಸುವಂತೆ, ಹುಟ್ಟಬಹುದಾದ ತಲ್ಲಣವನ್ನೂ ಅಳಿಸುವಂತೆ ಹೋಗುವ ಮಿಲಿಟರಿ ಟ್ರಕ್, ಅದರೊಳಗೆ ಹಾಡುವ, ನಗುವ ಸೈನಿಕರು. ತನ್ನ ಪಾಡಿಗೆ ತಾನು ತಣ್ಣಗೆ ಹೋಗುವಾಗ ಧಡ್ ಎನ್ನುವ ಶಬ್ದ.. ಪರದೆಯ ಎದುರು ಕುಳಿತಿದ್ದರೂ ಪರದೆಯ ಒಳಗೆ ಹೋಗಿ ನಡೆಯುತ್ತಿರುವ ಘಟನೆಯ ಒಂದು ಭಾಗವಾಗಿ ಉಸಿರು ಬಿಗಿಹಿಡಿದು ನೋಡುವವರ ಕೈ ಗೊತ್ತಿಲ್ಲದೇ ಕುರ್ಚಿಯ ಹಿಡಿಯನ್ನು ಬಿಗಿಯಾಗಿ ಹಿಡಿದು ಆತಂಕದಿಂದ ನೋಡುವಾಗ ಹೃದಯದ ಬಡಿತ ಕಿವಿಗೆ ಕೇಳುವಂತಾಗಿ ಅಲ್ಲೊಂದು ತಲ್ಲಣ. ಅಂತಹ ಪರಿಸ್ಥಿತಿಯಲ್ಲಿ ತಕ್ಷಣಕ್ಕೆ ಮಾಡುವುದು ಏನು? ಎಲ್ಲಾ ಶಕ್ತಿಯನ್ನು ಒಗ್ಗೂಡಿಸಿ ಆಪತ್ತಿಗೆ ಬೆನ್ನಾಗಿ ಪ್ರಾಣ ಉಳಿಸಿಕೊಳ್ಳುವುದಕ್ಕಾಗಿ ಓಡುವುದು. ಅದು ಮನುಷ್ಯ ಮಾತ್ರವಲ್ಲ ಎಲ್ಲಾ ಬದುಕಿರುವ ಜೀವಿಯೂ ಮಾಡುವ ಮೊದಲ ಕೆಲಸ. ಜೀವರಕ್ಷಿಸಿಕೊಳ್ಳಲು ಪ್ರಯತ್ನಿಸುವುದು.

ಅಲ್ಲೂ ಹಾಗೆಯೇ ಆಯಿತಾ ಎಂದರೆ ಉಹೂ ಅಂತ ದುರ್ಭರ ಕ್ಷಣದಲ್ಲೂ ಇಳಿದು ಬಾಗಿಲು ಹಾಕಿ ಸುತ್ತೆಲ್ಲಾ ಹದ್ದಿನ ಕಣ್ಣುಗಳಿಂದ ನೋಡಿ ಭೀಕರತೆಯನ್ನು ಸಾವು ಪಕ್ಕದಲ್ಲೇ ಹೊಂಚು ಹಾಕುವುದನ್ನೂ ಕಂಡೂ ಶಸ್ತ್ರವನ್ನು ಕೈಯಲ್ಲಿ ಹಿಡಿದು ಆ ಮೃತ್ಯುವಿಗೆ ಎದೆಯೊಡ್ಡಿ ಮುಂದಕ್ಕೆ ನಡೆಯುವುದು ಸೈನಿಕ. ಯಾವುದೇ ಕ್ಷಣದಲ್ಲೂ ಮೃತ್ಯು ಅಪ್ಪಬಹುದು ಎಂದು ಗೊತ್ತಿದ್ದರೂ ತನ್ನ ಕುಟುಂಬ, ವೈಯುಕ್ತಿಕ ಬದುಕು, ಕನಸು,ಯಾವುದನ್ನೂ ಲೆಕ್ಕಿಸದೆ ದೇಶಕ್ಕಾಗಿ ರಿಸ್ಕ್ ತೆಗೆದುಕೊಳ್ಳುವುದು ಅಷ್ಟು ಸುಲಭವಾ... ಯಾರಿಗಾಗಿಯೋ, ಅದೂ ನಾಳೆ ಅವರು ಅದನ್ನು ಗೌರವಿಸುತ್ತಾರೋ ಇಲ್ಲವೋ, ತನ್ನ ನಂಬಿದ ಕುಟುಂಬ ಏನಾಗುವುದೋ ಏನೋ ಎಂದು ಕ್ಷಣ ಮಾತ್ರವೂ ಯೋಚಿಸದೆ ಮುನ್ನುಗ್ಗುತ್ತಾರಲ್ಲ ಅದು ಸಹಜವಾ...ಅಲ್ಲಿ ಕುಳಿತ ಯಾರಿಗೂ ಅದು ಸಹಜವೆನ್ನಿಸುವುದಿಲ್ಲ. ಮನಸ್ಸು ತಾನೇ ತಾನಾಗಿ ಪ್ರಾರ್ಥಿಸಲು ತೊಡಗುತ್ತದೆ. ಶತ್ರು ನಾಶವಾಗಲಿ ಎಂದು ಬೇಡುತ್ತದೆ. ಆತಂಕದಲ್ಲಿಯೇ ದೃಷ್ಟಿ ಪರದೆಯ ಕಡೆ ನೋಡುತ್ತಿರುತ್ತದೆ. ಅವಗಢ ನಡೆದು ಅನೇಕ ಜೀವಗಳು ಆಹುತಿಯಾಗಿ ಬೆಂಕಿಯ ಕೆನ್ನಾಲಿಗೆ ಚಾಚಿ ಹೊಗೆ ಹರಡಿದಾಗ ಕಣ್ಣು ಮಂಜಾಗುತ್ತದೆ. ಅಮಾಯಕರ ಸಾವು ಕಂಡು ರಕ್ತ ಕುದಿಯುವಾಗಲೇ ಅವರಿಗಾಗಿ ಮನಸ್ಸು ಮರುಗುತ್ತದೆ. ಆದರೆ ದುಡ್ಡಿಗಾಗಿ ಸೈನ್ಯಕ್ಕೆ ಸೇರುತ್ತಾರೆ ಎನ್ನುವ ಮಾತು ಆಡುತ್ತಾರಲ್ಲ ಅವರು ನಿಜವಾಗಲೂ ಮನುಷ್ಯರೆನಾ ಅಂತಲೂ ಅನ್ನಿಸಿ ಅಸಹ್ಯವಾಗುತ್ತದೆ.

ಆಳುವ ಅರಸ ಹೇಗಿರುತ್ತನೋ ವ್ಯವಸ್ಥೆಯೂ ಹಾಗಿರುತ್ತದೆ. ಅಧಿಕಾರದ ಸ್ಥಾನದಲ್ಲಿರುವವರು ಅಭಿಮಾನ ಶೂನ್ಯರಾದರೆ ಉಳಿದವರು ಅನಿವಾರ್ಯವಾಗಿ ಕಿಚ್ಚನ್ನು ಎದೆಯಲ್ಲಿ ಉಳಿಸಿಕೊಂಡು ತಲೆಬಾಗಿ ಬದುಕಬೇಕಾಗುತ್ತದೆ. ಶೂರನಿಗೆ, ಸೈನಿಕನಿಗೆ ಮಾಡುವ ಅತಿ ದೊಡ್ಡ ಅವಮಾನವೆಂದರೆ ಜೀವ ಹೋಗುವ ಸನ್ನಿವೇಶದಲ್ಲೂ ಶಸ್ತ್ರ ಉಪಯೋಗಮಾಡುವ ಅಧಿಕಾರವನ್ನು ಕಿತ್ತು ಕೊಳ್ಳುವುದು. ತನ್ನ ಜೊತೆಗಾರರ ಜೀವ ಕಣ್ಣೆದೆರು ಹೋಗುವಾಗಲೂ, ಎದೆಯಲ್ಲಿ ಕಿಚ್ಚು ಉರಿಯುವಾಗಲೂ, ಅವಕಾಶವಿದ್ದರೂ ಒಂದು ಗುಂಡು ಹೊಡೆಯಲು ಅನುಮತಿಗಾಗಿ ಕಾಯುವುದು ಇದೆಯಲ್ಲ ಅದಕ್ಕಿಂತ ದುರ್ದೈವ ಮತ್ತೊಂದಿಲ್ಲ. ಆದರೆ ಬದಲಾದ ಪರಿಸ್ಥಿಯಲ್ಲಿ ಶತ್ರುವಿನ ಮನೆಗೆ ನುಗ್ಗಿ ಅವನನ್ನು ಹೊಡೆದು ಬರುವುದಿದೆಯಲ್ಲ ಅದು ನಮ್ಮ ಸ್ವಾಭಿಮಾನದ ಶೌರ್ಯದ ಅನಾವರಣ, ಜೊತೆಗಾರನಿಗೆ ಕೊಡುವ ಅಂತಿಮ ಗೌರವ. ಆತ್ಮಾಭಿಮಾನದ ಪ್ರದರ್ಶನ.

ಅನ್ಯಾಯದ ವಿರುದ್ಧ ಸಿಡಿದೇಳುವ ಗುಣ ದೊಡ್ಡದು. ಆದರೆ ಸಿಡಿದೇಳುವುದು ಯಾರ ಮೇಲೆ ಅನ್ನೋದೂ ಕೂಡ ಅಷ್ಟೇ ಮುಖ್ಯವಾಗುತ್ತದೆ. ಸಮಾಜದ ಅಸಮಾನತೆ, ಉಳ್ಳವರ ಕ್ರೌರ್ಯದ ಬಗ್ಗೆ ಹೋರಾಡುತ್ತೇವೆ ಎನ್ನುವ ನಕ್ಸಲರು ಮುಗಿಬೀಳುವುದು ಮಾತ್ರ ಅಮಾಯಕರ ಮೇಲೆ, ಅಸಹಾಯಕರ ಮೇಲೆಯೇ. ಮೂಲಭೂತ ಅವಶ್ಯಕತೆಗಳಿಗಾಗಿ ಹೋರಾಡುತ್ತೇವೆ ಎನ್ನುವ ಅವರು ನಾಶ ಮಾಡುವುದು ಅದೇ ಮೂಲಭೂತ ಆವಶ್ಯಕತೆಗಳಾದ ರಸ್ತೆ, ಸೇತುವೆ, ಪೋಲಿಸ್ ಸ್ಟೇಷನ್ ಗಳನ್ನ ಉಡಾಯಿಸುವುದರ ಮೂಲಕವೇ. ಅವರಿಗಿರುವ ಬೆಂಬಲ, ಪೋಷಣೆ, ಸಹಾಯ, ಶಸ್ತ್ರಗಳು ಎಲ್ಲಿಂದ ಹೇಗೆ ಬರುತ್ತವೆ ಎನ್ನುವುದು ಸದ್ಯಕ್ಕೆ ರಹಸ್ಯವಾಗಿಯೇನೂ ಉಳಿದಿಲ್ಲ. ಅವರಿಂದ ಆದ ಉಪಯೋಗ, ತೊಂದರೆಗಳನ್ನು ಲೆಕ್ಕ ಹಾಕಿದರೆ ತೊಂದರೆಯ ತಕ್ಕಡಿಯ ಭಾರವೇ ಹೆಚ್ಚಿರುವುದೂ ಸುಳ್ಳಲ್ಲ. ಮ್ಯಾನ್ಮಾರ್ ಕಾಡಿನೊಳಗೆ ನುಗ್ಗಿ ಅವರನ್ನು ಹೊಡೆದು ಬರುವ ಸೈನ್ಯದ ಶೌರ್ಯ ನಮ್ಮ ಆಕ್ರೋಶಕ್ಕೆ ಉತ್ತರವೇನೋ ಅನ್ನಿಸಿ ಸಮಾಧಾನವಾಗುತ್ತದೆ.

ಇವೆಲ್ಲಕ್ಕಿಂತ ಮುಖ್ಯವಾಗಿ ನಡೆದಿದ್ದು ಗಡಿಯಲ್ಲಿ. ಉಗ್ರಗಾಮಿಗಳನ್ನು ಕಳುಹಿಸಿ ಅವರಿಗೆ ಧರ್ಮದ ಅಫೀಮು ರಕ್ತಗತವಾಗಿಸಿ ಕೊಲ್ಲುವುದೇ ಪರಮ ಧ್ಯೇಯ ಎಂದು ನಂಬಿಸಿ ಹೇಡಿತನದಿಂದ, ಮೋಸದಿಂದ ಸೈನಿಕರ ಮೇಲೆ ಧಾಳಿ ಮಾಡಿಸುವ ಪಾಕಿಸ್ತಾನದ ಕುತಂತ್ರಿತನಕ್ಕೆ, ದ್ವೇಷಕ್ಕೆ, ಧರ್ಮದ ಅಮಲಿಗೆ ಸುಖಾಸುಮ್ಮನೆ ಬಲಿಯಾಗುವ ನಮ್ಮ ಸೈನಿಕರ ಸಾವಿಗೆ ಪ್ರತಿಕಾರವಾಗಿ, ಈ ನೆಲದ ಗುಣ ಕ್ಷಾತ್ರತ್ವವೇ ಎಂದು ಸಾಧಿಸಿದ, ನಮ್ಮ ಸೈನಿಕರು ಹೇಡಿಗಳಲ್ಲ ರಣವೀರರು ಎಂದು ಸಿದ್ದ ಪಡಿಸಿದ, ಅವರ ಅಭಿಮಾನವನ್ನು ಎತ್ತಿ ಹಿಡಿದ, ಸ್ವಾಭಿಮಾನ ಪ್ರಚುರ ಪಡಿಸಿ ವಿಶ್ವಕ್ಕೆ ಭಾರತದ ಶಕ್ತಿ ಸಾಮರ್ಥ್ಯ ಪರಿಚಯಿಸಿದ ಘಟನೆಯೇ ಸರ್ಜಿಕಲ್ ಸ್ಟ್ರೈಕ್. ಅದು ಹೇಗೆ ನಡೆಯಿತು ಅನ್ನುವುದನ್ನ ಜನರಿಗೆ ಪರಿಚಯಿಸಲು ಮಾಡಿದ ಸಿನಿಮಾವೆ ಉರಿ.

ಕೇವಲ ಮಿಲಿಟರಿಯಲ್ಲಿ ಕಾರ್ಯ ನಿರ್ವಹಿಸುವವರು ಮಾತ್ರ ಸೈನಿಕರ ಎಂದರೆ ಅಲ್ಲ. ಅವರನ್ನು ಅಲ್ಲಿಗೆ ಕಳುಹಿಸಿಕೊಟ್ಟ ಅವರ ಕುಟುಂಬ ಕೂಡಾ ಸೈನಿಕರೇ. ಹಿಂದುರಿಗೆ ಬರುವ ಯಾವುದೇ ನಂಬಿಕೆಯಿಲ್ಲದಿದ್ದರೂ, ಕಣ್ಣಂಚು ಒದ್ದೆಯಾದರೂ ನಗುತ್ತಾ ಆತ್ಮವಿಶ್ವಾಸ ತುಂಬಿ ಕಳುಹಿಸುತ್ತಾರಲ್ಲ ಅವರೆಲ್ಲರೂ ಸೈನಿಕರೇ. ರಾಷ್ಟ್ರದ್ವಜವನ್ನು ಹೊದ್ದು ಬಂದ ದೇಹವನ್ನು ಕಂಡು ದುಃಖ ಆಘಾತವಾದರೂ ಈ ದೇಶವನ್ನು, ಅಲ್ಲಿನ ವ್ಯವಸ್ಥೆಯನ್ನು ನಿಂದಿಸದೆ ಆ ಸಂದರ್ಭದಲ್ಲೂ ದ್ವಜವನ್ನು ಎರಡೂ ಕೈಗಳಿಂದ ಸಮರ್ಪಣಾಭಾವದಿಂದ ಅಷ್ಟೇ ಗೌರವದಿಂದ ಸ್ವೀಕರಿಸುತ್ತಾರಲ್ಲ ಅವರು ನಿಜವಾದ ಸೈನಿಕರೇ. ಮೊಳಗುವ ರಾಷ್ಟಗೀತೆಗೆ ಕಣ್ಣು ಮಂಜಾಗಿ ಅಶ್ರುಧಾರೆ ಉದುರುತ್ತಿದ್ದರೂ ಸೆಲ್ಯೂಟ್ ಹೊಡೆದು ವಿದಾಯ ಹೇಳುತ್ತಾರಲ್ಲ ಅವರು  ಸೈನಿಕರಲ್ಲದೆ ಮತ್ಯಾರು ಆಗಲು ಸಾಧ್ಯ. ಆದರೆ ಸಿನೆಮಾ ನೋಡಲು ಹೋದಾಗ ರಾಷ್ಟ್ರಗೀತೆಗೆ ಎದ್ದು ನಿಲ್ಲಬೇಕಾ ಎಂದು ವಾದ, ಅಪಹಾಸ್ಯ ದೇಶಭಕ್ತಿಯ ಕುರಿತು ವ್ಯಾಖ್ಯಾನ ಮಾಡುತ್ತಾರಲ್ಲ ಅವರು ಮಾತ್ರ  ನಿಜವಾಗಲು  ಮನುಷ್ಯರಾ ಎನ್ನುವ ಸಂದೇಹ ಖಂಡಿತವಾಗಿಯೂ ಬರುತ್ತದೆ.

ಯಾವುದೇ ಸಂದರ್ಭದಲ್ಲೂ ಧೃತಿಗೆಡದೆ ಕೇವಲ ಹಿಡಿದ ಕಾರ್ಯವನ್ನು ಯಶಸ್ವಿಗೊಳಿಸಲು ಯೋಚಿಸುವ, ಅದಕ್ಕಾಗಿ ಕಾರ್ಯ ಸನ್ನದ್ಧರಾಗುವ, ತನ್ನದೇ ಜೀವ ಇನ್ನೊಂದು ಕ್ಷಣದಲ್ಲಿ ಹೋಗುತ್ತದೆ ಎನ್ನುವ ಗಳಿಗೆಯಲ್ಲೂ ದೇಶವನ್ನು ಜೊತೆಗಾರರನ್ನು ಕಾಯುವ, ಶಕ್ತಿ , ಪ್ರಾಣ ಎರಡೂ ಬಸಿದು ಹೋಗುವ ಕೊನೆಯ ನಿಮಿಷದಲ್ಲೂ ತನ್ನಿಂದ ಏನು ಉಪಯೋಗವಾಗಬಹುದು ಎಂದೇ ಯೋಚಿಸುವ, ಹಿಂದೆ ಮುಂದೆ ಯೋಚಿಸದೆ ಮುನ್ನುಗ್ಗುವ, ಮೃತ್ಯುವಿಗೆ ಮುಖಾಮುಖಿಯಾಗುತ್ತಲೇ ತನ್ನ ದೇಶಕ್ಕಾಗಿ ಸೆಣಸುವ, ತಾನು, ತನ್ನ ಕುಟುಂಬ, ಬದುಕು ಕನಸು ಎಂದು ಸೀಮಿತವಾಗದೆ ಇಡೀ ದೇಶವೇ ತನ್ನದು ಎಂದು ಭಾವಿಸಿ ಬದುಕುವ, ಅದಕ್ಕಾಗಿ ಹುತಾತ್ಮನಾಗುವ ಸೈನಿಕ ಒಂದು ಕ್ಷಣ ಸ್ವಾರ್ಥಿಯಾದರೆ ಏನಾಗಬಹುದು? ಒಂದು ಗಳಿಗೆ ವಿಶ್ರಾಂತಿ ಬೇಕು ಎಂದು ಭಾವಿಸಿದರೆ ಏನಾಗಬಹುದು? ವಿಷಮ ಪರಿಸ್ಥಿತಿಯಲ್ಲಿ, ಮಳೆ, ಚಳಿ, ಗಾಳಿ, ಹಿಮಪಾತಗಳ ಗೊಡವೆ ಯಾಕೆ ನನ್ನ ಬದುಕು ನಾನು ಬದುಕುವ ಎಂದು ನಿರ್ಧರಿಸಿದರೆ ಏನಾಗಬಹುದು?

ಅವರಲ್ಲಿ ದಿನದ ಇಪ್ಪತ್ತನಾಲ್ಕು ಗಂಟೆಯೂ ಸತತವಾಗಿ ವಾತಾವರಣ ಇನ್ನೊಂದು ಮತ್ತೊಂದು ಪರಿಗಣಿಸದೆ ಕೆಲಸ ನಿರ್ವಹಿಸುವುದಕ್ಕೆ ನಾವಿಲ್ಲಿ ಬೆಚ್ಚಗೆ ಮನೆಯಲ್ಲಿ ಕುಳಿತೋ, ಕನಸಿನ ಬೆನ್ನಟ್ಟಿಯೋ, ವಿಹಾರ, ಮನೋರಂಜನೆಗಳಲ್ಲಿ ನೆಮ್ಮದಿಯಾಗಿ ಮುಳುಗಿ ಹೋಗಿದ್ದೇವೆ. ತಿನ್ನುವ ಪ್ರತಿ ಅಗುಳು ಶ್ರಮದಿಂದ ಪ್ರಾಮಾಣಿಕತೆಯಿಂದ ಗಳಿಸಿದ್ದಾದರೆ ಅದು ದೇಹ ಹಾಗೂ ಮನಸ್ಸಿನ ಆರೋಗ್ಯಕ್ಕೆ ಉತ್ತಮವಂತೆ. ಹಾಗೆ ತಿಂದ ಆಹಾರ  ಸ್ವಾಭಿಮಾನ ಆತ್ಮಾಭಿಮಾನ ಎರಡನ್ನೂ ರಕ್ತಗತಗೊಳಿಸುತ್ತದಂತೆ. ಅವೆರಡೂ ಇದ್ದಾಗ ಅವಮಾನವನ್ನು ಸಹಿಸದ, ಶತ್ರು ಅಂಗಳದಲ್ಲಿ ಅಟ್ಟಹಾಸ ಮಾಡುವಾಗ ಎದುರಿಸಿ ಅಟ್ಟಾಡಿಸಿ ಹೊಡೆಯುವ ಸ್ವಭಾವ ಬರುತ್ತದೆ. ತನ್ನ ಆತ್ಮಗೌರವವನ್ನು ಉಳಿಸಿಕೊಳ್ಳುವ ಹಾಗೆಯೇ ಈ ನೆಲದ, ಹುಟ್ಟಿದ ಮಣ್ಣಿನ ರಕ್ಷಣೆ, ಹಾಗೂ ಗೌರವ ಕಾಪಾಡುವ ಗುಣ ಸಹಜವಾಗಿ ಬರುತ್ತದೆ. ಅದಕ್ಕೆ ಅಧಿಕಾರದಲ್ಲಿರುವವರ ಸ್ವಾಭಿಮಾನ, ರಾಷ್ಟ್ರಪ್ರೇಮ ಜೊತೆಯಾದರೆ ನೂರಾನೆ ಬಲ ಬಂದ ಹಾಗೆ ಆಗಿ ಇನ್ನಷ್ಟು ಕೆಚ್ಚು ಹುಟ್ಟುತ್ತದೆ. ಆ ಕೆಚ್ಚು ಸರ್ಜಿಕಲ್ ಸ್ಟ್ರೈಕ್ ಗೆ ಹೊರಡುವ ಸೈನಿಕರಲ್ಲಿ, ಅವರಿಗೆ ಭೂಮಿಕೆ ಸಿದ್ದಪಡಿಸಿ ಕೊಟ್ಟ ಉಳಿದವರಲ್ಲಿ, ಅದರ ಸಫಲತೆ ಶ್ರಮಿಸಿದ ಪ್ರತಿಯೊಬ್ಬರಲ್ಲಿ ಕಾಣಿಸುತ್ತದೆ. ಪ್ರತಿಯೊಬ್ಬರ ಪಾತ್ರವೂ ಅದರಲ್ಲಿ ತುಂಬಾ ಮುಖ್ಯ. ಒಬ್ಬರು ಎಡವಿದರೂ, ತುಸು ಮೈ ಮರೆತರೂ ಇಡೀ ಆಪರೇಷನ್ ವಿಫಲವಾಗಿ ಹೋಗುತಿತ್ತು.

ಬಿಟ್ಟಿಯಾಗಿ ಸಿಗುವ ಯಾವುದಕ್ಕೂ ಬೆಲೆಯಿರುವುದಿಲ್ಲ. ಕೈಯೊಡ್ಡುವಾಗ ನಾಚಿಕೆ ಇರುವುದಿಲ್ಲ. ಹಾಗೆ ತಿಂದದ್ದೂ ಗುಲಾಮಿತನವನ್ನು ಬಿಟ್ಟು ಬೇರೇನೂ ಕಲಿಸುವುದಿಲ್ಲ. ಗುಲಾಮಿತನ, ಹಾಗೂ ಸೋಮಾರಿತನ ಅಭ್ಯಾಸವಾದ ದೇಹ ಮತ್ತು ಮನಸ್ಸು ಎರಡೂ ಏನು ಬೇಕಾದರೂ ಮಾಡಲು ಸಿದ್ಧವಾಗಿ ಹೋಗುತ್ತದೆ. ಹುಟ್ಟಿದ ಮನೆಯನ್ನು ನಾಶಮಾಡುವ ಕೆಲಸವೂ ಸಹಜವಾಗಿ ಹೋಗುತ್ತದೆ. ಯಾರ ಶ್ರಮ, ತ್ಯಾಗವೂ ಅರ್ಥವಾಗದೆ, ಆಲೋಚನೆ ಮಾಡುವ ಶಕ್ತಿಯೂ ಇಲ್ಲದೆ   ಬದುಕು ಅರ್ಥವನ್ನೇ ಕಳೆದುಕೊಳ್ಳುತ್ತದೆ. ಹಾಗಾದಾಗಲೇ ಯಾರದ್ದೋ ತೆರಿಗೆಯ ಹಣದಲಿ ನಡೆಯುವ ಕಾರ್ಯಕ್ರಮದಲ್ಲಿ ಕುಳಿತು ಸೈನಿಕರು ರೇಪಿಸ್ಟ್ ಗಳು ಎನ್ನುವ ಮಾತು ಹೊರಗೆ ಬರುತ್ತದೆ. ಅವರಲ್ಲಿ ನಿಂತಿರುವುದರಿಂದಲೇ ಇಲ್ಲಿ ಉಳಿದವರು ಅವರ ಮನೆಯರೂ ಸೇರಿದಂತೆ ಗೌರವವಾಗಿ ಬದುಕುತ್ತಿದ್ದಾರೆ ಎನ್ನುವುದು ಮರತೇಹೋಗುತ್ತದೆ.

ಮೂರ್ಖರಿಗೆ, ಹೇಡಿಗಳಿಗೆ, ದ್ರೋಹಿಗಳಿಗೆ ಆತ್ಮಾಭಿಮಾನ ಇಲ್ಲದವರಿಗೆ ಅಂತವರನ್ನು ಕಂಡರೆ ಮಾತ್ರ ಪ್ರೀತಿ ಉಕ್ಕುತ್ತದೆ. ನಿಜಕ್ಕೂ ಅವರಿಗೆ ಪ್ರೀತಿ ಇದೆಯಾ ಎಂದರೆ ಉಹೂ ಭಯವಿರುತ್ತದೆ ಅಷ್ಟೇ. ಅವರು ಅಲ್ಲಿಗೆ ಹೋಗುವ ಮುಕ್ತ ಅವಕಾಶಗಳು ಇದ್ದರೂ ಹೋಗುವುದಿಲ್ಲ. ಆದರೆ ಬಿಟ್ಟಿಯಾಗಿ ಏನೂ ಸಿಗುವುದಿಲ್ಲ ನೋಡಿ ಹಾಗಾಗಿ ಅದಕ್ಕೆ ಪ್ರತಿಕ್ರಿಯೆ ನೀಡಬೇಕು, ಹೋರಾಟ ಮಾಡಬೇಕು. ಸ್ವಾಭಿಮಾನ ಕಳೆದುಕೊಂಡ ಮೇಲೆ ಆಡಿಸಿದಂತೆ ಆಡಬೇಕು. ಹಾಗಾಗಿಯೇ ಇಂಥ ಮಾತುಗಳು, ಪ್ರತಿಕ್ರಿಯೆಗಳು ಹೊರಬರುತ್ತದೆ. ಹಾಗೆ ಮಾತಾಡುವ ಅವರು ಮಾತ್ರ ತಪ್ಪಿಸ್ಥತ್ತರೆ ಎಂದರೆ ಅಲ್ಲ. ಅದಕ್ಕೂ ಮೀರಿದ ತಪ್ಪು ಎಂದರೆ ಅದನ್ನು ವಿರೋಧಿಸದೆ ಖಂಡಿಸದೆ ಇರುವುದು. ಹಾಗೆ ಖಂಡಿಸದೆ ಇದ್ದರೆ ಅದು ಸೈನಿಕರಿಗೆ ಮಾಡುವ ಅವಮಾನ ಮಾತ್ರವಲ್ಲ ನಮ್ಮ ಷಂಡತನದ ಅನಾವರಣ ಕೂಡ.

ಬದಲಾದ ಭಾರತ, ಸೈನಿಕರ ನಿಜವಾದ ಕೆಚ್ಚು ಸಾಮರ್ಥ್ಯ, ನಾವೆಷ್ಟು ಸುರಕ್ಷಿತ ಹಾಗೂ ನೆಮ್ಮದಿಯ ಬದುಕು ಸಾಗಿಸುತ್ತಿದ್ದೇವೆ, ಯಾರ ತ್ಯಾಗ, ಬಲಿದಾನ ನಮ್ಮನ್ನು ಕಾಯುತ್ತಿದೆ ಎಂದು ಅರ್ಥವಾಗಲು ಉರಿ ಸಿನಿಮಾವನ್ನು ನೋಡಲೇಬೇಕು. ಈ ಬದುಕಿನ ಮೇಲೆ ಯಾರ ಋಣ ಎಷ್ಟಿದೆ ಎಂದು ತಿಳಿಯಲು, ಮೈ ಕಣ ಕಣವೂ ದೇಶಕ್ಕಾಗಿ ಮಿಡಿಯಲು, ಹೆಚ್ಚಾಗಿ ಆತ್ಮಾಭಿಮಾನ ಪ್ರಜ್ವಲಿಸಲು ಈ ಸಿನಿಮಾ ಸಹಾಯ ಮಾಡುತ್ತದೆ. ಹಾಗಾದರೆ ಈ ಸಿನೆಮಾ ಎಲ್ಲರಿಗೂ ಇಷ್ಟವಾಯಿತಾ ಅಂದ್ರೆ ಉಹೂ ಇಲ್ಲೂ ಒಂದಷ್ಟು ಜನರಿಗೆ ಅದು ಹೆಸರಿಗೆ ತಕ್ಕ ಹಾಗೆ ಉರಿ ಹುಟ್ಟಿಸಿದೆ. ಇಲ್ಲೇ ಹುಟ್ಟಿ ಇಲ್ಲೇ ಬೆಳೆದು ಹೆತ್ತ ತಾಯಿಯನ್ನೇ ಆಡಿಕೊಳ್ಳುವ, ಅವಳಿಗೆ ದ್ರೋಹ ಬಗೆಯುವ ಮನುಷ್ಯರೂಪಿಗಳಿಗೆ ಆ ಸಿನೆಮಾದಲ್ಲಿ ಬರುವ ಒಂದು ಸನ್ನಿವೇಶದಂತೆ ಹಿಂದೆ ಬಾಂಬ್ ಹಾಕಿದ ಹಾಗೆ ಆಗಿದೆ.

ಸರ್ಜಿಕಲ್ ಸ್ಟ್ರೈಕ್ ಬಗ್ಗೆ ಪ್ರಶ್ನಿಸಿದವರಿಗೆ, ಅದು ಸುಳ್ಳೇ ಎಂದವರಿಗೆ, ಅದರ ಬಗ್ಗೆ ಸರ್ಟಿಫಿಕೇಟ್ ಕೇಳಿದವರಿಗೆ ಎಲ್ಲರಿಗೂ ಉತ್ತರದಂತಿರುವ ಈ ಚಲಚಿತ್ರವನ್ನು ಪ್ರತಿಯೊಬ್ಬರೂ ನೋಡಿದರೆ ಒಳ್ಳೆಯದಿತ್ತು ಅನ್ನಿಸುವ ವೇಳೆಗೆ ಉತ್ತರಪ್ರದೇಶದಲ್ಲಿ ಅದರ ಮೇಲಿನ ತೆರಿಗೆ ವಿನಾಯತಿ ಮಾಡಿರುವ ಸುದ್ದಿ ಹೊರಬಂದಿದೆ. ಅರೆ ವಾವ್ ಎಂದು ಕೊಳ್ಳುವಾಗಲೇ ಅಮೇಥಿಯಲ್ಲಿ ಒಂದು ಥಿಯೇಟರ್ ಕೂಡಾ ಇಲ್ಲ ಅನ್ನುವ ಸುದ್ಧಿ ಅಚ್ಚರಿ ಹುಟ್ಟಿಸಿ ವಿಷಾದ ಮೂಡಿಸುವ ಹೊತ್ತಿನಲ್ಲೇ ಅಲ್ಲಿಯ ಜನರಿಗೆ ಅದನ್ನು ತೋರಿಸುವ ವ್ಯವಸ್ಥೆ ನಡೆಯುತ್ತಿದ್ದೆ ಎನ್ನುವ ಸುದ್ದಿಯೂ ಬರುತ್ತಿದೆ.

ಸೈನಿಕರ ಬದುಕು, ಅನಿಶ್ಚಿತ ಗಳಿಗೆಗಳು, ಅವರ ಸ್ಥೈರ್ಯ, ಮೃತ್ಯುವಿಗೆ ಎದೆಯೊಡ್ಡುವ ಧೈರ್ಯ, ಹಗಲು, ರಾತ್ರಿ, ಚಳಿ, ಮಳೆ, ಬಿಸಿಲು ಎನ್ನದೆ ಕನಿಷ್ಠ ಸೌಲಭ್ಯವೂ ಇಲ್ಲದೆ ಇದ್ದರೂ ದೇಶಕ್ಕಾಗಿ ಅವರು ಕಾರ್ಯ ನಿರ್ವಹಿಸುವ ಪರಿ, ಆ ಶ್ರದ್ಧೆ, ಮನಃಶಕ್ತಿ, ದೇಶವೇ ತನ್ನ ಕುಟುಂಬ ಎಂದುಕೊಳ್ಳುವ ರೀತಿ, ಜೀವ ಹೋಗುವ ಕೊನೆಯ ಗಳಿಗೆಯವರೆಗೂ ದೇಶವೇ ಮೊದಲು ಎನ್ನುವ ಭಾವ, ಎಲ್ಲವೂ ಅರ್ಥವಾಗುತ್ತದೆ. ಸಿನಿಮಾ ಮುಗಿಯುವ ವೇಳೆಗೆ ಅರಿವಿಲ್ಲದಂತೆ ಎದ್ದು ಅವರಿಗೆ ಸೆಲ್ಯೂಟ್ ಹೊಡೆದು ಕಣ್ಣು ಒದ್ದೆಯಾಗಿ ಗಂಟಲು ಗದ್ಗದಿತವಾಗುತ್ತದೆ. ಅವರ ಬಗ್ಗೆ ಹೆಮ್ಮೆ ಮೂಡುತ್ತದೆ. ನಾವೆಷ್ಟು ಸುಖವಾಗಿ ನೆಮ್ಮದಿಯಾಗಿ ಇದ್ದೇವೆ ಅನ್ನೋದು ಮೊದಲು ತಿಳಿಯುತ್ತೆ. ಅನಾವಶ್ಯಕವಾಗಿ ನಾಲಿಗೆ ಹರಿಯಬಿಡುವವರ ಮೇಲೆ ಉತ್ತರ ಕೊಡಲು ಮನಸ್ಸು ಸಜ್ಜಾಗುತ್ತದೆ.

ಸ್ವಾಭಿಮಾನದ ಉರಿ ಉರಿಯಲಿ... ಉರಿಯುತ್ತಿರಲಿ.... ಇನ್ನಾದರೂ ಕ್ಷಾತ್ರತ್ವ ಮೈ ಕೊಡವಿ ಮೇಲೇಳಲಿ..


Comments

Popular posts from this blog

ಮಾತಂಗ ಪರ್ವತ

ರಂಜದ ಹೂ

ಬರಿದೆ ಆಡುವ ಮಾತಿಗರ್ಥವಿಲ್ಲ...