ಕೋಶಿಶ್ ಕವಿತೆಗಳು

ಬೆಳಿಗ್ಗೆ ಎದ್ದ ಕೂಡಲೇ ಹಬೆಯಾಡುವ ಬಿಸಿ ಬಿಸಿ ಕಾಫಿ ಕುಡಿದಾಗ ಇಡೀ ದಿನಕ್ಕೆ ಚೈತನ್ಯ ಸಿಕ್ಕ ಹಾಗೆ. ಕಾಫಿ ಕೇವಲ ಪೇಯವಾ.. ಅದು ಒಬ್ಬೊಬ್ಬರಿಗೆ ಒಂದೊಂದು ಭಾವ. ಅಪ್ಪಟ ಮಲೆನಾಡಿಗರಿಗೆ ಅದು ಅಮೃತ.  ಅವರ ಬದುಕು, ಭಾವ, ಪ್ರತಿಯೊಂದು ಅದರೊಂದಿಗೆ ಮಿಳಿತ. ಒಂದು ದಿನ ಹನಿ ನೀರಲ್ಲಿದೆ ಬದುಕಿದರೂ ಕಾಫಿಯಿಲ್ಲದೆ ಇರಲಾರರು. ಅಂತ ಅನುಬಂಧ ಅದರ ಜೊತೆಗೆ. ಹಾಗಾಗಿ ಕಾಫಿ ಮಾಡುವುದೂ ಒಂದು ಕಲೆ. ಬದುಕಿನ ಹಾಗೆ ಅದು ಸುಲಭಕ್ಕೆ ಒಲಿಯದ, ಇಷ್ಟವಾಗದ ವಿಷಯ. ಹದವಾದ ಕಾಫಿ ಮಾಡುವುದು ಒಂದು ಕಲೆ ಇಲ್ಲವಾದರೆ ಮಾಯದ ಕಲೆ.

ಕಾಫಿ ನೀರು, ಕಾಫಿಪುಡಿ, ಹಾಲು, ಸಕ್ಕರೆ ಇವುಗಳ ಹದವಾದ ಮಿಶ್ರಣ. ಬದುಕು ಭಾವಗಳ ಮಿಶ್ರಣ ಹೇಗೆ ಇದೂ ಹಾಗೆ. ಅಲ್ಲಿ ಕಹಿಯಾದ ಕಾಫಿಪುಡಿ, ಹಾಗೂ ಸಿಹಿಯಾದ ಸಕ್ಕರೆ ಎರಡೂ ಬೇಕು. ಅವೆರೆಡು ಸೇರದ ಹೊರತು ಕಾಫಿ ಆಗಲಾರದು. ಸುಖ, ದುಃಖ ಎರಡರ ಮಿಳಿತದ ಬದುಕು ಹೇಗೆ ಅರ್ಥಪೂರ್ಣವೋ ಹಾಗೇ. ಇಂತದೊಂದು ಅರ್ಥಪೂರ್ಣ ಕವನಗಳ ಗೊಂಚಲು ನಲ್ಲತಂಬಿ ಸರ್ ಅವರ ಕೋಶಿಸ್ ಕವಿತೆಗಳು. ಇದು ಕವಿತೆಯಾ ಗೊತ್ತಿಲ್ಲ. ಕವಿತೆಯೆಂದರೆ ಕಬ್ಬಿಣದ ಕಡಲೆ ಎಂದುಕೊಳ್ಳುವ ನನ್ನಂತವಳನ್ನು ಕವಿತೆಯ ಕಡೆಗೆ ಕರೆದೊಯ್ಯುವ ಹಾಗಿರುವುದಂತೂ ಹೌದು.

ಪ್ರತಿಯೊಬ್ಬರ ಬದುಕಿನಲ್ಲೂ ಒಬ್ಬರು ಇರ್ತಾರೆ. ಅವರು ಗೆಳೆಯನೋ, ಆತ್ಮಬಂಧುವೋ, ಅಪ್ತರೋ ಯಾರೋ ಆಗಿರಬಹುದು. ಯಾವುದೋ ಸಂಕಷ್ಟದ ಸಮಯದಲ್ಲೋ, ನೋವಿನಲ್ಲೋ, ಗೊಂದಲಲ್ಲೋ ತಮ್ಮ ಮಾತಿನಿಂದ ದಾರಿ ತೋರುವವರು. ಇಲ್ಲೂ ವಿನ್ಸೆಂಟ್ ಇದ್ದಾನೆ. ಅವನು ಕವಿಗೆ ಮಾತ್ರ ಆತ್ಮಬಂಧುವಾ ಅಂದರೆ ಅಲ್ಲ. ಯಾರಿಗೆ ಬೇಕಾದರೂ ಆಗಬಹುದಾದ ಅನ್ನಿಸಬಹುದಾದ ವ್ಯಕ್ತಿತ್ವ. ಕಾಫಿ ಅಷ್ಟೇ ಸಂಕೀರ್ಣ ಅನ್ನಿಸಿದರೂ ಅಷ್ಟೇ ಆಪ್ತ, ಹಾಗೂ ಹಿತ. ಬದುಕು ತಣ್ಣಗಿರಬೇಕು ಆದರೆ ಕಾಫಿ ಬಿಸಿಯಾಗಿಯೇ ಇರಬೇಕು. ಹಬೆಯಾಡುವ ಕಾಫಿಯನ್ನೇ ತಂದಿಡುವ ವಿನ್ಸೆಂಟ್ ಮಾತು ಅಷ್ಟೇ ಬಿಸಿ ಆದರೆ ಸುಡುವ ಬಿಸಿಯಲ್ಲ. ಒಳಗನ್ನು ಬೆಚ್ಚಗಾಗಿಸುವ ಹಿತದ ಬಿಸಿ.

ಚಿಂತೆ ಬಿಡಿ ಸಾರ್ ಪವಾಡವಾಗುತ್ತೆ
ಹಾರೆಯ ಪೆಟ್ಟಿಗೆ ಸೀಳದ ಬಂಡೆ
ಬೀಜದ ಮೊಳಕೆಗೆ ಬಿರಿಯುತ್ತೆ ಎಂದ..
ಕಾಫಿಯ ಗುಟುಕು ಒಂದೊಂದೇ ಹನಿ ಒಳಗೆ ಇಳಿದು ಗಂಟಲು, ಕರಳು ಬೆಚ್ಹಗಾಗಿಸುವಂತೆ ಈ ಸಾಲುಗಳು ಬೆಚ್ಚಗಿನ ಅನುಭೂತಿ ಕೊಡುತ್ತದೆ. ಕಾಫಿ ಒಳಗೆ ಇಳಿದಂತೆ ಶಕ್ತಿ ಸಂಚಯನವಾದ ಹಾಗೆ ಈ ಸಾಲುಗಳು ಸ್ಥೈರ್ಯ ಹೆಚ್ಚಿಸುತ್ತದೆ. ಹೊಸ ಹುರುಪು ಹೊಸ ಭರವಸೆ ಹುಟ್ಟಿ ಕಾಲುಗಳಿಗೆ ನಡೆಯುವ ಹುಮ್ಮಸ್ಸು ಸಿಗುತ್ತದೆ.

ಕಾಫಿ ಮಾಡುವುದು ಸುಲಭವಾ.. ಉಹೂ ಖಂಡಿತ ಅಲ್ಲ. ನೀರು ಮರಳಬೇಕು. ಬದುಕು ಕಾಯಬೇಕು ಆಗಲೇ ಅದು ಹೀರಿಕೊಳ್ಳಲು ಸಾಧ್ಯ. ಫಿಲ್ಟರ್ ಗೆ ಪುಡಿ ಹಾಕಬೇಕು ಅದು ನುಣ್ಣಗೂ ಇರಬಾರದು, ಜಾಸಿ ಒರಟೂ ಇರಬಾರದು. ಹದಬೇಕು. ಹಾಗೆ ಪುಡಿ ಹಾಕಿದ ಮೇಲೆ ಮರಳುವ ನೀರು ಸುರಿಯಬೇಕು..
ಗಾಯಗೊಳಿಸಿದವರೇ
ಮುಲಾಮು ಹಚ್ಚಬೇಕಾಗಿರುವುದು
ಸಂಬಂಧದ ಸೊಬಗು
ಅಲ್ಲವೇ ಸಾರ್ ಎನ್ನುವ ವಿನ್ಸೆಂಟ್ ಮಾತು ಇಲ್ಲಿ ಅರ್ಥವಾಗುತ್ತದೆ, ಆಪ್ತವಾಗುತ್ತದೆ.

ರಾತ್ರಿ ಹಾಗೆ ಸುರಿದ ನೀರು ಪುಡಿಯೊಟ್ಟಿಗೆ ಬೆರೆತು ಅದರ ಸಾರವನ್ನೆಲ್ಲಾ ಹೀರಿ  ಹನಿ ಹನಿಯಾಗಿ ಇಳಿದು ಬೆಳಗ್ಗೆ ಏಳುವಾಗ ದಪ್ಪವಾದ ಸ್ಟ್ರಾಂಗ್ ಆದ ಡಿಕಾಕ್ಷನ್ ತಯಾರಾಗಿರುತ್ತದೆ.
ಕಳೆದು ಕೊಳ್ಳದೆ
ಪಡೆದವರಿಲ್ಲ ಸಾರ್ ಎನ್ನುವ ವಿನ್ಸೆಂಟ್ ಮಾತಿನಂತೆ ಏನನ್ನಾದರೂ ಪಡೆಯಲು ಮತ್ತೇನಾದರೂ ಕಳೆದುಕೊಳ್ಳಲೇ ಬೇಕು. ಯಾವುದಕ್ಕೆ ಯಾವುದು ಎನ್ನುವುದರ ಲೆಕ್ಕಾಚಾರ ಮಾತ್ರ ಗೊತ್ತಿರಬೇಕು. ಆ ಕಂದು ಬಣ್ಣದ ಡಿಕಾಕ್ಷನ್ ಹಾಗೆ ಕುಡಿದರೆ ಕಹಿ. ಏಕಾಂತಕ್ಕೆ ಜೊತೆ ಬೇಕು ಅನ್ನುವ ವಿನ್ಸೆಂಟ್ ಮಾತಿನಂತೆ ಅದಕ್ಕೆ ಇನ್ನೊಂದಿಷ್ಟು ಜೊತೆಯಾಗಬೇಕು. ಹಾಲು ಕುದಿಸಿ ಅದಕ್ಕೆ ತುಸು ಸಕ್ಕರೆ ಸೇರಿಸಬೇಕು. ಕಹಿ ಸಿಹಿ ಎರಡೂ ಬೆರೆತಾಗಲೇ ಕಾಫಿಗೆ ರುಚಿ, ಬದುಕಿಗೆ ಉನ್ನತಿ.

ಇಂಥಾ ಕಾಫಿ ಕೆಲವೊಮ್ಮೆ ಸ್ಟ್ರಾಂಗ್ ಜಾಸ್ತಿ ಆಗಿ ಕಹಿ ಅನ್ನಿಸುವುದೂ ಉಂಟು. ಕನ್ನಡಿಯಲ್ಲೂ ಪ್ರತಿಬಿಂಬದ ನಿರೀಕ್ಷೆ ಇರಬಾರದು ಸಾರ್ ಎನ್ನುವ ವಿನ್ಸೆಂಟ್ ಮಾತು ಈ ಸ್ಟ್ರಾಂಗ್ ಕಾಫಿಯಂತೆ. ಶೂನ್ಯದಲ್ಲೊಂದು ಮೌನವನ್ನು, ಮೌನದಲ್ಲೊಂದು ಮಾತನ್ನು ಹುಟ್ಟುಹಾಕುವ ಶಕ್ತಿ ವಿನ್ಸೆಂಟ್ ನ ಮಾತುಗಳಲ್ಲಿದೆ. ಒಳಗೆ ಬಿಸಿಯಾಗಿ ಇಳಿಯುವ ಕಾಫಿಯಲ್ಲಿದೆ. ಹಾಗೆ ಇಳಿಯುತ್ತಾ ಎದೆಗೆ ತಾಕುವ, ಕರುಳು ಬೆಚ್ಚಗಾಗಿಸುವ ಕಾಫಿ ಕೆಲವೊಮ್ಮೆ ನಾಲಿಗೆಯನ್ನೂ ಸುಡುತ್ತದೆ. ನೊರೆ ನೋರೆಯಾದ ಕಾಫಿಯ ಗುಳ್ಳೆಗಳು ಒಡೆಯುವ ಹಾಗೆ ಬದುಕಿನ ಭ್ರಮೆಗಳೂ ಒಡೆಯುತ್ತವೆ. ಮುಷ್ಠಿ ತೆರೆದಾಗಲೂ ಚಿಟ್ಟೆ ಜೀವಂತವಾಗಿರಬೇಕು ಎನ್ನುವ ಸಾಲಿನ ಅರ್ಥ ಅರಿವಿಗೆ ಬರುತ್ತದೆ.

ಒಂದೊಂದೇ ಗುಟುಕು ಕಾಫಿ ಹೀರುವಾಗ ಹಾಗೆ, ಒಂದೊಂದೇ ಹನಿ ಒಳಕ್ಕೆ ಇಳಿಯುವ ಹಾಗೆ ಇಲ್ಲಿ ವಿನ್ಸೆಂಟ್ ಬದುಕಿನ ಸತ್ಯಗಳನ್ನು, ರೀತಿಯನ್ನು ಅನಾವರಣ ಮಾಡುತ್ತಾ ಹೋಗುತ್ತಾನೆ. ಎಲೆ ಚಿಗುರುವಾಗಲು ಮೌನ, ಎಲೆ ಉದುರುವಾಗಲೂ ಮೌನ  ಎನ್ನುತ್ತಾ ನಮ್ಮ ಭ್ರಮೆಯನ್ನು ಹರಿಯುತ್ತಾ, ಅಹಂಕಾರವನ್ನು ನಾಶ ಮಾಡುತ್ತಾ ಹೋಗುತ್ತಾನೆ. ಓದುತ್ತಾ ಓದುತ್ತಾ ಮನಸ್ಸು ಆರ್ದ್ರವಾಗುತ್ತದೆ, ಜೀವಂತಿಕೆ ಹುಟ್ಟುತ್ತದೆ, ಹೊಸ ಚೈತನ್ಯ ಚಿಮ್ಮುತ್ತದೆ. ಒಂದೇ ಸಾಲಿನಲ್ಲಿ ಹೇಳಬೇಕಾದರೆ ನಡುಗುವ ಚಳಿಯಲ್ಲಿ ಬಿಸಿ ಕಾಫಿ ಕುಡಿದಾಗ ಉಂಟಾಗುವ ಭಾವದಂತೆ ಆಗುತ್ತದೆ. ಬದುಕಿಗೊಬ್ಬ ವಿನ್ಸೆಂಟ್ ಬೇಕು ಅನ್ನಿಸುತ್ತಲೇ ನಮ್ಮ ಬದುಕಲ್ಲಿ ಬಂದು ಹೋದವರ ನಡುವೆ ಅವನನ್ನು ಅರಸುತ್ತದೆ. ನೆನಪುಗಳ ರಾಶಿಯಲ್ಲಿ ಬದುಕು ಸಹನಿಯವಾಗುವಂತೆ ಮಾಡುತ್ತಲೇ ಮುಂದಿನ ದಾರಿ ನಿಚ್ಚಳವಾಗಿಸುವಲ್ಲಿ ತನ್ನ ಕೊಡುಗೆ ನೀಡುತ್ತದೆ.

ಏನೇ ಹೇಳಿದರೂ, ಏನೇ ಓದಿದರೂ ಬದುಕು ಇಷ್ಟೇ ಅಲ್ಲಾ ಅನ್ನೋದು ಸತ್ಯ. ಅದನ್ನೇ ವಿನ್ಸೆಂಟ್ ಕೂಡಾ ಹೇಳುತ್ತಾನೆ
ಮನುಷ್ಯ, ಪ್ರೀತಿ, ಸಾವು
ಎಂದಿಗೂ ನಿಗೂಢ ಸಾರ್...
ವಿನ್ಸೆಂಟ್ ಕಾಫಿ
ಹೆಚ್ಚು ಬಿಸಿಯಾಗಿತ್ತು....

Comments

Popular posts from this blog

ಮಾತಂಗ ಪರ್ವತ

ರಂಜದ ಹೂ

ಬರಿದೆ ಆಡುವ ಮಾತಿಗರ್ಥವಿಲ್ಲ...